ವಿಭಕ್ತಿ ಪ್ರತ್ಯಯಗಳು
From Wikipedia
ವಿಭಕ್ತಿ ಪ್ರತ್ಯಯಗಳು ವ್ಯಾಕರಣದ ಒಂದು ಪ್ರಮುಖ ಅಂಗ.
'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಕರಗಳ ಗುಂಪು"ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು, ಹೊರತು ಇವೇ ಸ್ವತಂತ್ರ ಪದಗಳಲ್ಲ.
ಮಾದರಿ: 'ತೆ' ಪ್ರತ್ಯಯ ಸಮಾನ + ತೆ = ಸಮಾನತೆ ಮಾನವೀಯ + ತೆ = ಮಾನವೀಯತೆ ಸರಳ + ತೆ = ಸರಳತೆ
ಒಂದು ವಾಕ್ಯ/ಸಾಲಿನಲ್ಲಿ ಇರುವ ಹೆಸರುಪದಗಳ(ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು(ಬೆಸುಗೆಯನ್ನು) ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.
ಇವು ಇಂಗ್ಲೀಷ್ ವ್ಯಾಕರಣದಲ್ಲಿ ಬರುವ prepositionಗಳಿಗೆ ಸಮ ಎಂದು ತಿಳಿಯಬಹುದು
ಮಾದರಿ:
೧. "ರಾಮನ ಹೆಂಡತಿ ಸೀತೆ"
ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರು ಹೆಸರುಪದಗಳ ನಡುವಣ ನಂಟನ್ನು 'ರಾಮನು' ಹೆಸರುಪದದ ಕೊನೆಗೆ ಸೇರಿರುವ 'ಅ' ಪ್ರತ್ಯಯವು ತಿಳಿಸುವುದು.
೨. "ಕೆರೆಗೆ ಬಿದ್ದನು"
ಇಲ್ಲಿ 'ಕೆರೆ' ಎಂಬ ಹೆಸರುಪದ ಮತ್ತು 'ಬಿದ್ದನು' ಎಂಬ ಕ್ರಿಯಾಪದಗಳಿಗೆ ಇರುವ ಬೆಸುಗೆಯನ್ನು, 'ಕೆರೆ' ಹೆಸರುಪದದ ಕೊನೆಗೆ ಸೇರಿರುವ 'ಗೆ' ಪ್ರತ್ಯಯವು ತಿಳಿಸುವುದು.
[ಬದಲಾಯಿಸಿ] ಪ್ರತ್ಯಯಗಳು
ಇಲ್ಲಿ ಕನ್ನಡದಲ್ಲಿ ಇರುವ ಹಲವು ವಿಭಕ್ತಿ ಪ್ರತ್ಯಯಗಳ ಪಟ್ಟಿ ನೀಡಲಾಗಿದೆ
# | ವಿಭಕ್ತಿ | ಅರ್ಥ (ಕಾರಾಕಾರ್ಥ) | ಹೊಸಗನ್ನಡ ಪ್ರತ್ಯಯ | ಹಳಗನ್ನಡ ಪ್ರತ್ಯಯ |
---|---|---|---|---|
೧ | ಪ್ರಥಮಾ | ಕರ್ತ್ರರ್ಥ/ಮಾಡುಗ(ಕೆಲಸ ಮಾಡುವ ನಾಮಪದ) | ಉ | ಮ್ |
೨ | ದ್ವಿತೀಯಾ | ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು | ಅನ್ನು | ಅಂ |
೩ | ತೃತಿಯಾ | ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು | ಇಂದ | ಇಂ, ಇಂದಂ, ಇಂದೆ, ಎ |
೪ | ಚತುರ್ಥೀ | ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ | ಗೆ, ಇಗೆ, ಕ್ಕೆ, ಆಕ್ಕೆ | ಗೆ, ಕೆ, ಕ್ಕೆ |
೫ | ಪಂಚಮೀ | ಅಪಾದಾನ (ಅಗಲಿಕೆ)/ಪ್ರೇರಣೆ | ದೆಸೆಯಿಂದ | ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ |
೬ | ಷಷ್ಠೀ | ಸಂಬಂಧ/ನಂಟು/ಬೆಸುಗೆ | ಅ | ಅ |
೭ | ಸಪ್ತಮೀ | ಅಧಿಕರಣ/ಜಾಗ | ಅಲ್ಲಿ, ಒಳು, ಆಗೆ | ಒಳ್ |
"ಗಮನಿಸಿರಿ:" ಈ ಮೇಲಿನ ಪಟ್ಟಿಯು ಸಂಸ್ಕೃತದ ವ್ಯಾಕರಣದ ವಿಭಕ್ತಿನಿಯಮಗಳಂತೆ ಇರುವುದು. ಆದರೆ ಕನ್ನಡ ಮತ್ತು ಸಂಸ್ಕೃತದ ವಿಭಕ್ತಿ ಪ್ರತ್ಯಯಗಳ ಬಳಕೆಗಳಲ್ಲಿ ಹಲವಾರು ಪ್ರಮುಖ ವ್ಯತ್ಯಾಸಗಳಿವೆ. ಆದುದರಿಂದ ಹಲವು ವೇಳೆ ಕನ್ನಡದ ವಿಭಕ್ತಿ ಪ್ರಯೋಗವು ಮೇಲಿನ ಪಟ್ಟಿಯನ್ನು ಅನುಸರಿಸುವುದಿಲ್ಲ.
ಮಾದರಿ:
೧.ಪ್ರಥಮಾ : "ರಾಮನು ಬಂದನು"
ಇಲ್ಲಿ "ಬಂದನು" ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ 'ರಾಮ'(ಕರ್ತೃ).
"ಗಮನ""
ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ "ರಾಮನು ಬಂದನು" ಎಂದು ಹೇಳಲು, "ರಾಮ ಬಂದ" ಎಂದು ಹೇಳುವುದು, ಬರೆಯುವುದು ಉಂಟು.
೨.ದ್ವಿತೀಯಾ : "ರಾಮನನ್ನು ಕರೆದರು"
ಇಲ್ಲಿ "ಕರೆದರು" ಎಂಬ ಕ್ರಿಯೆಯನ್ನು 'ರಾಮ' ಎಂಬ ನಾಮಪದದ ಕುರಿತು( ನಾಮಪದದ ಮೇಲೆ ) ನಡೆಯಿತು.
ಗಮನ: ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಮಾದರಿ: ಸಂಸ್ಕೃತದಲ್ಲಿ "ಗ್ರಾಮಂ ಗತಃ" ಅಂದರೆ "ಗ್ರಾಮಕ್ಕೆ ಹೋದವನು" ಎಂದು. ಆದರೆ "ಗ್ರಾಮಂ" ದ್ವಿತೀಯಾ ವಿಭಕ್ತಿ, "ಗ್ರಾಮಕ್ಕೆ" ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ "ಗ್ರಾಮವನ್ನು ಹೋದನು" ಎಂದರೆ ತಪ್ಪು.
ಹೀಗೆ ಮುಂತಾದವು.
೩.ತೃತೀಯಾ: "ರಾಮನು ದೊಣ್ಣೆಯಿಂದ ಹೊಡೆದನು"
ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು 'ದೊಣ್ಣೆ' ಎಂಬ ನಾಮಪದವನ್ನು ಬಳಸಿ ನಡೆಸಿತು.
ಗಮನ: ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಮಾದರಿ:
೧. "ರಾಮೇನ ಸಹ" ಅಂದರೆ "ರಾಮನ ಜೊತೆ" ಎಂದು, ಆದರೆ "ರಾಮೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ರಾಮನ" ಷಷ್ಠೀ ವಿಭಕ್ತಿ. ಸಂಸ್ಕೃತದಂತೆ "ರಾಮನಿಂದ ಜೊತೆ" ಎಂದು ಕನ್ನಡದಲ್ಲಿ ಹೇಳಿದರೆ ಅದು ತಪ್ಪು.
೨. "ಸಂಸ್ಕೃತೇನ ಭಾಷತಿ" ಅಂದರೆ "ಸಂಸ್ಕೃತದಲ್ಲಿ ಮಾತಾಡುತ್ತದೆ" ಎಂದು, ಆದರೆ "ಸಂಸ್ಕೃತೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ಸಂಸ್ಕೃತದಲ್ಲಿ" ಇದು ಸಪ್ತಮೀ.
ಹೀಗೆ ಮುಂತಾದವು.
೪.ಚತುರ್ಥೀ : "ರಾಮನು ಮನೆಗೆ ಹೋದನು"
ಇಲ್ಲಿ 'ರಾಮ' ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ 'ಮನೆ' ಎಂಬ ನಾಮಪದ ತಿಳಿಸುವ ಜಾಗ.
೫.ಪಂಚಮೀ : "ರಾಮನ ದೆಸೆಯಿಂದ ಶಿವ ಹೋದನು"
ಇಲ್ಲಿ 'ರಾಮ' ಎಂಬ ನಾಮಪದದ ಪ್ರೇರಣೆಯಿಂದ 'ಶಿವ' ಎಂಬ ನಾಮಪದವು(ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ಮಾಡಿತು.
೬.ಷಷ್ಠೀ : "ರಾಮನ ಹೆಂಡತಿ ಸೀತೆ"
ಇಲ್ಲಿ 'ರಾಮ' ಎಂದ ನಾಮಪದಕ್ಕೆ ಮತ್ತು 'ಸೀತೆ' ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು 'ಹೆಂಡತಿ' ಎಂಬ ನಾಮಪದವು ತಿಳಿಸುವುದು.
೭.ಸಪ್ತಮೀ : "ರಾಮನು ಮನೆಯಲ್ಲಿ ಹೊಡೆದನು"
ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು ನಡೆಸಿದ ಜಾಗವನ್ನು 'ಮನೆ' ಎಂಬ ನಾಮಪದವು ತಿಳಿಸುವುದು.
[ಬದಲಾಯಿಸಿ] ವಿಭಕ್ತಿ ಪ್ರತ್ಯಯಗಳ ಬಳಕೆ ಮತ್ತು ಅವು ಕೊಡುವ ಅರ್ಥ'
ಮನೆ ಎಂಬ ನಾಮಪದಕ್ಕೆ ಏಳು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
- ಪ್ರಥಮಾ ವಿಭಕ್ತಿ: ಮನೆ + ಉ = ಮನೆಯು
- ದ್ವಿತೀಯಾ ವಿಭಕ್ತಿ: ಮನೆ + ಅನ್ನು = ಮನೆಯನ್ನು
- ತೃತೀಯಾ ವಿಭಕ್ತಿ: ಮನೆ + ಇಂದ = ಮನೆಯಿಂದ
- ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
- ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
- ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
- ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
"ಗಮನಿಸಿರಿ:"
ಕನ್ನಡದಲ್ಲಿ ಪ್ರಥಮಾ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಅಲ್ಲದೆ ಪ್ರಥಮ ಮತ್ತು ಪಂಚಮೀ ಎಂಬ ಎರಡು ವಿಭಕ್ತಿಗಳು ಕನ್ನಡದಲ್ಲಿ ಇರದಿದ್ದರು ನಡೆಯುವುದು. ಪಂಚಮೀ ಮತ್ತು ತೃತೀಯಾ ವಿಭಕ್ತಿಗಳ ನಡುವೆ ಕನ್ನಡದಲ್ಲಿ ಹೆಚ್ಚು ಭೇದವಿಲ್ಲ.
ಮಾದರಿ:
ರಾಮನು ಕಾಡಿಗೆ ಹೋದನು = ರಾಮ ಕಾಡಿಗೆ ಹೋದನು
ಸಿಂಹದ ದೆಸೆಯಿಂದ ಹೆದರಿದೆನು = ಸಿಂಹದಿಂದ ಹೆದರಿದೆನು.