ಬಿ.ಎಲ್.ರೈಸ್
From Wikipedia
ಕನ್ನಡಕ್ಕಾಗಿ ದುಡಿದ ವಿದೇಶೀಯರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಬಿ.ಎಲ್.ರೈಸ್.ಇವರ ಪೂರ್ಣ ಹೆಸರು ಬೆಂಜಮಿನ್ ಲ್ಯೆಯಿ ರೈಸ್. ಇವರು ೧೮೩೭,ಜುಲೈ ೧೭ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಕ್ರೈಸ್ತ ಧರ್ಮಬೋಧಕರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ ರೈಸ್ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಮರಳಿದ ಬಳಿಕ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾದರು. ತರುವಾಯ ಮೈಸೂರು ಸಂಸ್ಥಾನದಲ್ಲಿ ಶಿಕ್ಷಣಾಧಿಕಾರಿಯಾಗಿ, ವಿದ್ಯಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
೧೮೯೦ರಲ್ಲಿ ಕೆ.ಶೇಷಾದ್ರಿ ಅಯ್ಯರರವರು ಪುರಾತತ್ವ ಇಲಾಖೆ ಪ್ರಾರಂಭಿಸಿದಾಗ, ರೈಸ್ ಅಲ್ಲಿ ತಮ್ಮ ಸೇವೆ ನೀಡಿದರು. ಪಂಪ, ನಾಗಚಂದ್ರ ಮೊದಲಾದ ಕನ್ನಡದ ಹಳೆಯ ಕವಿಗಳ ಬಗೆಗೆ ಅಮೂಲ್ಯ ಸಂಶೋಧನೆ ಮಾಡಿದರು. ಮೈಸೂರು ಗೆಜೆಟಿಯರ್, ಬಿಬ್ಲಿಯಾಥಿಕಾ ಕರ್ನಾಟಕಾ ಮೊದಲಾದವು ರೈಸರ ಅಪೂರ್ವ ಕೊಡುಗೆಗಳು.ಪಂಪಭಾರತ,ಪಂಪರಾಮಾಯಣ,ಶಬ್ದಾನುಶಾಸನ,ಕರ್ನಾಟ ಭಾಷಾಭೂಷಣ,ಕವಿರಾಜ ಮಾರ್ಗ,ಅಮರಕೋಶ,ಕಾವ್ಯಾವಲೋಕನ ಮೊದಲಾದ ಕೃತಿಗಳನ್ನು ಸಂಪಾದಿಸಿ 'ಬಿಲ್ಲಿಯಾಥಿಕಾ ಕರ್ನಾಟಿಕಾ'ಗ್ರಂಥಮಾಲೆಯಲ್ಲಿ ಪ್ರಕಟಿಸಿದರು.ರೈಸರು ಸಂಗ್ರಹಿಸಿದ ೮೮೬೯ ಶಾಸನಗಳು ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ ದಾಖಲೆಯಾಗಿವೆ.ಕನ್ನಡನಾಡಿನ ಉದ್ದಗಲಕ್ಕೂ ಸಂಚರಿಸಿ ಕಲೆಹಾಕಿದ ಶಾಸನಗಳನ್ನು ೧೨ ಸಂಪುಟಗಳಲ್ಲಿ ಪ್ರಕಟಿಸಿದರು.ಕ್ರಿ.ಪೂ.೨೫೦ರಷ್ಟು ಹಳೆಯದಾದ ಸಾಮ್ರಾಟ್ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಇವರದ್ದು. ಭಾರತದ ಪ್ರಥಮ ಸಾಮ್ರಾಟನಾದ ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಇವರೇ!
೧೯೦೭ರಲ್ಲಿ ಇಂಗ್ಲಂಡಿಗೆ ಮರಳಿದ ಬಿ.ಎಲ್.ರೈಸ್ ೧೯೨೭,ಜುಲೈ ೧೦ರಂದು ನಿಧನರಾದರು.