ಟಿ.ಪಿ.ಕೈಲಾಸಂ
From Wikipedia
" ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ "
ಟಿ ಪಿ ಕೈಲಾಸಂ (೧೮೮೪ - ೧೯೪೬) ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ನಾಡು-ನುಡಿಯ ವೈಭವದ ಬಗೆಗಿನ ಚಿತ್ರಗೀತೆಯೊಂದರಲ್ಲಿ ಹೀಗೆ ಹೇಳಲಾಗಿದೆ: ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ
ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ಇವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು ಪ್ರಸಿದ್ಧವಾಗಿದೆ.
[ಬದಲಾಯಿಸಿ] ಜೀವನ
ತಮಿಳು ಮೂಲದವರಾದರೂ ಕನ್ನಡವನ್ನು ಎತ್ತಿ ಹಿಡಿದು ಕನ್ನಡಕ್ಕಾಗಿ ಶ್ರಮಿಸಿದ ಇವರು, ಕನ್ನಡ ರಂಗಭೂಮಿಗೆ ತಮ್ಮ ಜೀವನದ ಬಹು ಪಾಲು ಶ್ರಮವನ್ನು ಧಾರೆ ಎರೆದರು. ಜೀವನದುದ್ದಕ್ಕೂ ಹಾಸ್ಯಭರಿತ ಮಾತಿನ ಚಟಾಕಿಯಿಂದ ಸುತ್ತಲಿರುವ ಜನರ ಮನವೊಲಿಸಿಕೊಳ್ಳುವ, ರಂಜಿಸುವ ಗುಣ ಇವರಲ್ಲಿತ್ತು. ಕೈಲಾಸಂರವರು ಅತ್ಯಂತ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದರು. ಕೈಲಾಸಂ ಸ್ವತಃ ಅತ್ಯಂತ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರು. ಅವರು ಇಂಗ್ಲೆಂಡಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಚಿನ್ನದ ಪದಕಗಳನ್ನು ಪಡೆದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸರ್ಕಾರಿ ಹುದ್ದೆಯಲ್ಲಿ ತಮ್ಮ ಹೆಸರು ಮಾಡಿದ್ದರು. ಸರ್ಕಾರಿ ಕೆಲಸದಲ್ಲಿ ಅವರ ಮನಸ್ಸು ತುಂಬಾ ದಿನ ಇರಲಿಲ್ಲ. ಕೈಲಾಸಂರವರ ಬಗ್ಗೆ ಶ್ರೀ ಕೇಶವ ರಾವ್ ಅವರು ಒಂದು ಸ್ವಾರಸ್ಯಕರವಾದ ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು 'ಕನ್ನಡಕ್ಕೊಬ್ಬನೇ ಕೈಲಾಸಂ'. ಈ ಪುಸ್ತಕದಲ್ಲಿ ಕೈಲಾಸಂರವರ ಬಾಲ್ಯ, ವಿದ್ಯಾಭ್ಯಾಸ ಮತ್ತು ಅವರ ಕೆಲಸದ ಬಗ್ಗೆ ಸಾಕಷ್ಟು ವಿವರವಾಗಿ ಬರೆದಿರುತ್ತಾರೆ. ಮತ್ತೊಂದು ಪುಸ್ತಕವೆಂದರೆ 'ಕೈಲಾಸಂ ಜೋಕ್ಸೂ ಸಾಂಗ್ಸೂ'. ಇದರಲ್ಲಿ ಕೈಲಾಸಂರವರ ಹಾಸ್ಯ ಪ್ರಜ್ಣೆಯ ಸಮಗ್ರ ಪರಿಚಯವಾಗುತ್ತದೆ.
ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ಒಳ್ಳೆಯ ಶಿಕ್ಷಣ, ವ್ಯಾಯಾಮ ಮತ್ತು ವಾತಾವರಣದಿಂದ ಒಂದು ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ದಾರಿಯಾಯಿತು. ಉನ್ನತ ವ್ಯಾಸಂಗಕ್ಕಾಗಿ ಅವರನ್ನು ಆಗಿನ ಕಾಲಕ್ಕೇ ಇಂಗ್ಲೆಂಡಿಗೆ ಮೈಸೂರು ಮಹರಾಜರು ತಮ್ಮ ಖರ್ಚಿನಿಂದ ಕಳಿಸಿದರು. ಅಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹಾಗೂ ಚಿನ್ನದ ಪದಕಗಳನ್ನು ಗಳಿಸಿದರು. ಅವರಿಗಿದ್ದ ಅಪಾರ ಪ್ರತಿಭೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮೂರೇ ವರ್ಷಗಳಲ್ಲಿ ಮುಗಿಸಬಹುದಾದರೂ ಅವರು ಸುಮಾರು ಏಳು ವರ್ಷಗಳ ಕಾಲ ತೆಗೆದುಕೊಂಡರು. ಏಕೆಂದರೆ, ಅವರಿಗೆ ಇಂಗ್ಲೆಂಡಿನ ಜೀವನ ಶೈಲಿ ತುಂಬಾ ಇಷ್ಟವಾಗಿ ಪ್ರತೀ ಸಲ ಪರೀಕ್ಷೆಗೆ ಏನಾದರೊಂದು ನೆಪ ಕೊಟ್ಟು ತಪ್ಪಿಸ್ಕೊಳ್ತಿದ್ರು. ಕೊನೆಗೆ ಮನೆಯಿಂದ ದುಡ್ಡು ಬರುವುದು ಕಷ್ಟವಾಗತೊಡಗಿದಾಗ ಉಳಿದ ಪರೀಕ್ಷೆಗಳನ್ನು ಮುಗಿಸಿ ಭಾರತಕ್ಕೆ ವಾಪಸ್ಸಾದರು. ಅವರಿಗೆ ಇಂಗ್ಲೀಶರ ಉಡುಪು ಧರಿಸುವುದು ಎಷ್ಟರ ಮಟ್ಟಿಗೆ ಕರಗತವಾಗಿತ್ತೆಂದರೆ ಅವರ ಕೆಲವು ಆಂಗ್ಲ ಮಿತ್ರರಿಗೆ ಕೈಲಾಸಂ ಬಟ್ಟೆ ಧರಿಸುವುದನ್ನು ಹೇಳಿಕೊಡುತ್ತಿದ್ದರು! ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು.
ಶ್ರೀ ಕೇಶವ ರಾವ್ ಅವರ 'ಕನ್ನಡಕ್ಕೊಬ್ಬನೇ ಕೈಲಾಸಂ' ಪುಸ್ತಕದಲ್ಲಿ ಕೈಲಾಸಂ ಅವರು ತಮ್ಮ ನಾಟಕಗಳಲ್ಲಿ ಆಡುಭಾಷೆಯ ಉಪಯೋಗದ ಬಗ್ಗೆ ಸಾಕಷ್ಟು ಸ್ವಾರಸ್ಯಕರವಾಗಿ ಉಲ್ಲೇಖಿಸಿದ್ದಾರೆ. ಒಂದು ಬಾರಿ ಅವರು ನಾಟಕ ಬರೆಸುತ್ತಿದ್ದಾಗ 'ಕಸಬಾ ಹೋಬಳಿ' ಎಂಬುದಕ್ಕೆ 'ಕಸ್ಬಾ ಹೋಬ್ಳಿ' ಅಂತ ಹೇಳಿದಾಗ ಬರೆದುಕೊಳ್ಳುತ್ತಿದ್ದ ಶಿಷ್ಯೋತ್ತಮ 'ಸಾರ್, ಹಾಗೆ ಬರೆದ್ರೆ ಜನ ನಗೋದಿಲ್ವೆ' ಅಂತ ಕೇಳಿದಾಗ ಕೈಲಾಸಂ 'ಜನ ನಗ್ಲೀ ಅಂತಾನೆ ಹೀಗೆ ಬರೆಸ್ತಾ ಇರೋದು, ತೆಪ್ನೆ ಹೇಳ್ದಾಗೆ ಬರ್ಕೊ ರಾಜಾ' ಅಂತ ಆ ಶಿಷ್ಯನ ಬಾಯಿ ಮುಚ್ಚಿಸಿದರು.
[ಬದಲಾಯಿಸಿ] 'ಆಧುನಿಕ ರಂಗಭೂಮಿಯ ಹರಿಕಾರ'
ಇವರು ಬರೆದ ನಾಟಕಗಳು ಅನೇಕ. ತಾವು ಬರೆದ ನಾಟಕಗಳಲ್ಲಿ ವ್ಯವಹಾರಿಕ ಭಾಷೆಯನ್ನು ಉಪಯೋಗಿಸಿಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಕೊನೆಗೆ ಅತ್ಯಂತ ಸ್ವಾರಸ್ಯಕರವಾಗಿದ್ದ ಇವರ ನಾಟಕಗಳು ಎಲ್ಲರ ಮನವನ್ನೂ ಗೆದ್ದಿತು!
[ಬದಲಾಯಿಸಿ] ಇವರು ರಚಿಸಿದ ನಾಟಕಗಳು
- ೧೯೧೮ - 'ಟೊಳ್ಳುಗಟ್ಟಿ'(ಅಥವಾ 'ಮಕ್ಕಳ ಸ್ಕೂಲ್ ಮನೇಲಲ್ವೇ')ಆಧುನಿಕ ಕನ್ನಡ ನಾಟಕ.
- ೧೯೨೦ - 'ಪೋಲಿ ಕಿಟ್ಟಿ' -- ಈ ನಾಟಕವು ಕನ್ನಡದಲ್ಲಿ ಸಿನಿಮಾ ಆಗಿ ಕೂಡ ಹೊರಬಂದು ಯಶಸ್ಸು ಕಂಡಿದೆ.
- ೧೯೨೯ - 'ಕಾಳಮ್ನ ಐಕ್ಳು','ಒಲವಿನ ಕೊಲೆ'.
- ಇತರೆ
- 'ಬಹಿಷ್ಕಾರ'
- 'ನಂಬಾಯ್ಸು'
- 'ಮೊಮ್ಮಗಳ ಮುಯ್ಯಿ'
- 'ಹರಿಶ್ಚಂದ್ರನ ಹಿಂಸಾ'
- 'ಹೋಂರೂಲು'
- 'ಗಂಡಸ್ಕತ್ರಿ'
- 'ವೈದ್ಯನ ವ್ಯಾಧಿ'
- 'ತಾಲಿಕ್ಕಟ್ಟೋಕ್ಕೂಲೀನೇ'
- 'ಹುತ್ತದಲ್ಲಿ ಹುತ್ತ'
- 'ಬಂಡ್ವಾಳ್ವಿಲ್ಲದ ಬಡಾಯಿ'
- 'ಅಮ್ಮಾವ್ರಗಂಡ'
- 'ಸೀಕರ್ಣೆ ಸಾವಿತ್ರಿ'
- 'ಸತ್ತವನ ಸಂತಾಪ'
- 'ಅನುಕೂಲಕ್ಕೊಬ್ಬಣ್ಣ'
- 'ನಮ್ಕಂಪ್ನಿ'
- 'ನಮ್ಕ್ಳಬ್ಬು'
- 'ನಮ್ಮ್ಬ್ರಾಹ್ಮಣ್ಕೆ'
- 'ಸೂಳೆ'