ಉತ್ತಂಗಿ ಚನ್ನಪ್ಪ
From Wikipedia
(೨೮, ಅಚ್ಟೋಬರ್, ೧೮೮೧-೨೮ ಆಗಸ್ಟ್, ೧೯೬೨)
'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡ ಉತ್ತಂಗಿಯವರು, 'ಸರ್ವಜ್ಞನ ವಚನ'ಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ. ಸರ್ವಜ್ಞನ ಪದಗಳನ್ನು ಪ್ರಸಿದ್ಧಿಪಡಿಸಿದ ಕೀರ್ತಿ, ರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರಿಗೆ, ಸಲ್ಲುತ್ತದೆ. ಇದಕ್ಕಾಗಿ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದರು. ಅವರ ಪ್ರಯತ್ನದಿಂದಾಗಿ ಅದು, ಎಲ್ಲರ ಮನೆಮಾತಾಗಿದೆ. ೧, ೯೨೮ ವಚನಗಳ ಪುಸ್ತಕವನ್ನು ಪ್ರಕಟಿಸಲು ಸುಮಾರು ೯ ವರ್ಷಗಳೇ ಹಿಡಿದವು. ಕ್ರೈಸ್ತಧರ್ಮಕ್ಕೆ ಸೇರಿದ ಉತ್ತಂಗಿಯವರು, ಕನ್ನಡದ ಸೇವೆಯನ್ನು ದೇವರ ಕೆಲಸವೆಂದೇ ತಿಳಿದಿದ್ದರು. ಬಾಸೆಲ್ ಮಿಶನ್ ನ, ರೆವ. ಫಾ. ಕಿಟ್ಟೆಲ್ ರಂತಹ ಹಲವಾರು ಮತಪ್ರಚಾರಕರೂ ಕನ್ನಡಭಾಷೆಗೆ ಸೇವೆಸಲ್ಲಿಸಿರುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ.
ಪರಿವಿಡಿ |
[ಬದಲಾಯಿಸಿ] ಬಾಲ್ಯ
ಉತ್ತಂಗಿ ಚನ್ನಪ್ಪನವರು, ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು ೧೮೮೧ ಅಕ್ಟೋಬರ ೨೮ ರಂದು ಜನಿಸಿದರು.ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ, ಉತ್ತಂಗಿ ಗ್ರಾಮದ, ಗೌಡರ ಮನೆತನದಲ್ಲಿ, ೨೮, ಅಕ್ಟೋಬರ್, ೧೮೮೧ ರಲ್ಲಿ ಜನಿಸಿದರು. ತಂದೆ, ದಾನಿಯೇಲಪ್ಪನವರು. ಅಣ್ಣ ಚನ್ನಪ್ಪ ಗೌಡರು. ಚನ್ನಪ್ಪನವರ ಅಜ್ಜನಿಗೆ, ಲಗ್ನವಾಗಿ ೨೫ ವರ್ಷಗಳಾದಮೇಲೆ ಒಂದು ಗಂಡು ಶಿಶುವಿನ ಜನನವಾಯಿತು. ಆ ಮಗುವೇ ದಾನಿ ಯೇಲಪ್ಪ. ಅವರ ಪೂರ್ವಜರು ಕ್ರಿಸ್ತಧರ್ಮವನ್ನು ಸ್ವೀಕರಿಸಿ ಅನೇಕ ದಶಕಗಳೇ ಆಗಿದ್ದವು. ಚನ್ನಪ್ಪನವರು, ಮೂರನೆಯ ತಲೆಮಾರಿನ ಕ್ರಿಶ್ಚಿಯನ್ನರು. ಗದಗ ಮತ್ತು ಬೆಟಗೇರಿಗಳ, "ಕೈಸ್ತ ಅನಾಥಾಶ್ರಮಗಳ" ಮೇಲ್ವಿಚಾರಣೆ ಯ ಜವಾಬ್ದಾರಿ ಇವರ ಮನೆತನಕ್ಕೆ ಬಂದಿತ್ತು. ಬಾಲ್ಯದಲ್ಲಿ ಇವರು ಅಷ್ಟೇನೂ ಬುದ್ಧಿವಂತರಾಗಿರಲಿಲ್ಲ. ಜ್ಞಾಪಕ ಶಕ್ತಿಯೂ ಕಡಿಮೆ. ಶಾಲೆಯ ಎಲ್ಲಾ ಬಾಲಕರಿಗಿಂತ ಅಭ್ಯಾಸದಲ್ಲಿ, ಹಿಂದೆ. ಗಣಿತ ಅವರಿಗೆ ಬಹಳ ತಲೆನೋವಿನ ವಿಷಯ. ಮೆಟ್ರಿಕ್ ಪರೀಕ್ಷೆಗ ಕುಳಿತುಕೊಳ್ಳಲಿಲ್ಲ. ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು. ಅವರ ಒಂದು ಮೆಚ್ಚುವಗುಣವೆಂದರೆ, ಅವರಿಗಿದ್ದ ಚಿಕಿತ್ಸಾತ್ಮಕ ಬುದ್ಧಿ. ತಮಗೆ ಒಪ್ಪಿಗೆಯಾಗದೆ ಯಾವುದನ್ನು ಕಣ್ಣುಮುಚ್ಚಿಕೊಂಡು ನಂಬುವ ಸ್ವಭಾವವಲ್ಲ.
[ಬದಲಾಯಿಸಿ] ದೈವಜ್ಞಾನ ಶಾಲೆ
ಚನ್ನಪ್ಪನವರು ತಾಯಿಯವರು ಇಚ್ಛಿಸಿದಂತೆ ಮಂಗಳೂರಿಗೆ ಹೋಗಿ, ದೈವಜ್ಞಾನ ಶಾಲೆಗೆ ಸೇರಿಕೊಂಡರು. ಕ್ರೈಸ್ತ ಧರ್ಮದ ಉಪದೇಶಗಳನ್ನು ಈ ಶಾಲೆಯಲ್ಲಿ ಬೋಧಿಸಲಾಗುತ್ತಿತ್ತು. ಅಲ್ಲಿನ ವಿದಾರ್ಥಿಗಳಿಗೆ ಕೊಡುತ್ತಿದ್ದ ಸಮವಸ್ತ್ರಗಳು, ಮುಂಗೈ ತೋಳಿನವು. ಕ್ರೈಸ್ತಧರ್ಮೋಪದೇಶಕರು, ಅವನ್ನು ಪರದೇಶದಿಂದ ತರಿಸಿ ಹಂಚುತ್ತಿದರು. ಆದರೆ ಚನ್ನಪ್ಪನವರು ಖಾದಿ ಅಂಗಿಯನ್ನು ಉಡಲು ಇಷ್ಟಪಡುತ್ತಿದ್ದರು. ನಿಷ್ಠದೇಶಾಭಿಮಾನಿಯದ ಅವರು, ತಮ್ಮ ಜೀವಮಾನವೆಲ್ಲಾ ಖಾದಿಬಟ್ಟೆಯಲ್ಲೇ ಕಳೆದರು. ಅವರ ಹಿರಿಯ ಅಧಿಕಾರಿಗಳಿಂದ ವಿರೋಧವನ್ನು ಸಹಿಸಬೇಕಾಗಿಬಂತು. ನಿಷ್ಠದೇಶಾಭಿಮಾನಿಯಾದ ಉತ್ತಂಗಿಯವರು, ತಮ್ಮ ಹಠವನ್ನು ಬಿಡಲಿಲ್ಲ. ಖಾದಿಬಟ್ಟೆಗಳು ಸೋವಿಯಾಗಿದ್ದು, ತಮಗೆ ಖರೀದಿಸಲು ಸುಲಭವೆಂದು ವಾದಿಸಿದರು. ನಿಜಕ್ಕೂ ಮಿತವ್ಯಯದಿಂದಾಗಿ ಅವರ ಗೆಳೆಯರೂ ಖಾದಿಯನ್ನೇ ಇಷ್ಟಪಟ್ಟರು. ಮುಂದೆ ಸರ್ವಾನುಮತದಿಂದಾಗಿ ಧರ್ಮೋಪದೇಶಕರಿಗೆಲ್ಲಾ ಖಾದಿಯೇ ಸಮವಸ್ತ್ರವಾಯಿತು. ೧೯೦೪ ರಲ್ಲಿ ಕೊನೆಯ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರು. ಧಾರವಾಡಕ್ಕೆ ವಾಪಸ್ ಹೋದರು. ಅಲ್ಲಿ ಅವರಿಗೆ ಉಪನ್ಯಾಸಕರ ಹುದ್ದೆ ಸಿಕ್ಕಿತು. ಚನ್ನಪ್ಪನವರು ಒಬ್ಬ ಸ್ವತ್ರಂತ್ರವಾಗಿ ಯೋಚಿಸುವ ವ್ಯಕ್ತಿಯಾಗಿದ್ದರು. ಶಾಲೆಯಲ್ಲಿ ಓದುತ್ತಿದ್ದಾಗಲೇ ಬಾಸೆಲ್ ಮಿಶನ್ ನ ಕೆಲವು ಗೆಳೆಯರ ಸಹಕಾರದಿಂದ ಒಂದು ಪತ್ರಿಕೆಯನ್ನು ಪ್ರಕಟಿಸಿದರು. ಬಾಸೆಲ್ ಮಿಶನ್ ನವರಿಗೆ ಇದು ಸರಿಬೀಳಲಿಲ್ಲ. ಕೂಡಲೆ ಅವರು ತಮ್ಮ ಮಿಶನ್ ನ ವಿಯಾರ್ಥಿಗಳ್ಯಾರೂ ಅದನ್ನು ಓದಕೂಡದೆಂದು ಆಜ್ಞಾಪಿಸಿದರು. ಸತ್ಯಕ್ಕಾಗಿ ಪ್ರತಿಭಟಿಸುವ ಚನ್ನಪ್ಪವವರ ಸ್ವಭಾವದಿಂದ ಧರ್ಮಶಿಕ್ಷಣ ಸಂಸ್ಥೆಯವರು ಅವರನ್ನು ಹೊರಗೆ ಹಾಕುವವರೆಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಧರ್ಯಶಾಲಿಯಾದ ಉತ್ತಂಗಿಯವರನ್ನು ಎದುರುಹಾಕಿಕೊಳ್ಳಲೂ ಆಡಳಿತವರ್ಗವೂ ಇಷ್ಟಪಡಲಿಲ್ಲ.
[ಬದಲಾಯಿಸಿ] ವಿಶಾಲಮನಸ್ಸಿನ ಮತೋಪದೇಶ
ರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರು, ಕ್ರೈಸ್ತಧರ್ಮದ ಉಪದೇಶಕರಾಗಿಯೂ, ತಮ್ಮ ಬೋಧನಕ್ರಮದಲ್ಲಿ ದೇಸಿ ಪದ್ಧತಿಯನ್ನು ಅಳವಡಿಸಿಕೊಂಡರು. ಮತಗಳೆಲ್ಲದರಲ್ಲೂ, ಅವರಿಗೆ ಗೌರವ ಮತ್ತು ಶ್ರದ್ಧೆ. ಪ್ರತಿಯೊಂದು ಮತದ ಒಳ್ಳೆಯ ಅಂಶಗಳನ್ನೂ ಗುರುತಿಸಿ, ಸಮಯಬಂದಾಗ ತಮ್ಮ ನಿರೂಪಣೆಯಲ್ಲಿ ಉದಾಹರಿಸುತ್ತಿದ್ದ ಅವರ ವೈಖರಿಯನ್ನು ಅನೇಕರು ಸಹಿಸಲಿಲ್ಲ. ಮೇಲಿನ ಅಧಿಕಾರಿಗಳಿಂದ ಪುನಃ ಪ್ರತಿಭಟನೆ ಬಂತು. ಕೆಲವು ವಿದೇಶಿ ಮತಬೋಧಕರು, ಚನ್ನಪ್ಪನವರಿಗೆ ಕ್ರೈತಧರ್ಮದಲ್ಲಿ ನಂಬಿಕೆ ಇಲ್ಲವೆಂದು ಆಡಿಕೊಂಡರು. ನಾವು ಮುಗ್ಧಜನರಿಗೆ ಅವರ ಧರ್ಮದಲ್ಲಿಇರುವ ಸತ್ಯಾಂಶಗಳನ್ನು ತಿಳಿಸಿಕೊಟ್ಟಮೇಲೆಯೂ ಅವರು ಸ್ವಧರ್ಮದಲ್ಲಿ ಶಾಂತಿಯನ್ನು ಕಾಣದೆ, ಹೋದರೆ, ಕೈಸ್ತಧರ್ಮವನ್ನು ಸ್ವೀಕರಿಸಲಿ. ಮಾನಸಿಕವಾಗಿ ಅವರು ಸಿದ್ಧರಾದರೆ ಮಾತ್ರ ನಿಜವಾದ ಧರ್ಮಾಂತರ ; ಇಲ್ಲವಾದರೆ, ಸ್ಥಳಾಂತರವಷ್ಟೇ. ಚನ್ನಪ್ಪನವರು ಬಸವಣ್ಣ, ಅವರ ಅನುಭವಮಂಟಪ, ಶರಣರುಗಳ ಬಗ್ಗೆ ಪೂಜ್ಯಭಾವವನ್ನು ಇಟ್ಟುಕೊಂಡು , ಅವರಿಗೆ ಗೌರವಕೊಡುತ್ತಿದ್ದರು. ಕೊನೆಗೆ, ಮತೋಪದೇಶಕರು ಒಂದು ಸಾರಿ, ಸಿಟ್ಟಿಗೆದ್ದು, ಒಂದು ಆಜ್ಞಾಪತ್ರವನ್ನು ಜಾರಿಗೊಳಿಸಿ, ಅವರನ್ನು ಮಿಶನ್ ನಿಂದ ವಜಾಮಾಡಲು ಆಜ್ಞೆಯನ್ನು ಜಾರಿಗೊಳಿಸಿದ್ದರು. ಈ ಸಂಧರ್ಬದಲ್ಲಿ, ಕೆ. ಬಿ. ಲೂಥಿ ಎಂಬ ಅಧಿಕಾರಿಯರಿಗೆ ಕೊಟ್ಟ, ಲಿಖಿತರೂಪದ ಜವಾಬು ಹೀಗಿದ್ದಿತು. " ಕ್ರೈಸ್ತಧರ್ಮದ ಸತ್ಯಗಳನ್ನು ಸಾರಿಹೇಳುವುದೊಂದೇ ನಮ್ಮ ಗುರಿ. ಅದನ್ನು ಕಾರ್ಯರೂಪಕ್ಕೆ ತರಲು ವಿದೇಶಿಯರಾದ ತಮಗೆ ಎಷ್ಟು ಉಪದೇಶ ಸ್ವಾತಂತ್ರವಿದೆಯೊ, ನನಗೂ ಅಷ್ಟೆ ಇದೆ. ನಾನೂ ಬಾಸೆಲ್ ಮಿಶನ್ ನ ಆಜ್ಞಾಕಾರಿ ಭಕ್ತ". ನನಗೂ ಜವಾಬ್ದಾರಿ ಏನು ಎಂಬುದು ತಿಳಿದಿದೆ ", ಮತ್ತೆ ಯಾರೂ ಅವರನ್ನು ಕೆಣಕಲು ಬರಲಿಲ್ಲ.
[ಬದಲಾಯಿಸಿ] ಸರ್ವಜ್ಞ ಕವಿಯಮೇಲೆ ಎಲ್ಲಿಲ್ಲದ ಗೌರವ
೧೯೫೦ ರಲ್ಲಿ ಉತ್ತಂಗಿಯವರು, ಇನ್ನೊಬ್ಬ ವಿದ್ವಾಂಸ, ಎಸ್.ಎಸ್.ಭೂಸನೂರಮಠ ರ ಜೊತೆಗೆ, " ಮೋಳಿಗೆ ಮಾರಯ್ಯ",ರಾಣಿ ಮಹಾದೇವಿಯರು, ವಚನಗಳ ಸಂಪಾದನೆಯ ಹೊಣೆಯನ್ನು ಹೊತ್ತುಕೊಂಡರು. ಒಬ್ಬ ಬರೆಯುವವನನ್ನು ನೇಮಿಸಿಕೊಂಡು ಪ್ರತಿತಿಂಗಳೂ ಅವನಿಗೆ ಸಂಬಳದ ವ್ಯವಸ್ಥೆಮಾಡಿದರು. ಪ್ರತಿದಿನವೂ ಸುಮಾರು ೬ ಗಂಟೆ ಕೆಲಸ, ೧೮ ತಿಂಗಳು ಹಿಡಿಯಿತು. ವಚನಗ್ರಂಥದ ಕೈಬರಹ ಪ್ರತಿಗಳ ಸಂಪೂರ್ಣಸಂಗ್ರಹಣ, ಶುದ್ಧೀಕರಣ, ಮತ್ತು ಸಂಯೋಜನೆ, ಹೀಗೆ ೩ ದೃಷ್ಟಿಕೋನಗಳನ್ನಿಟ್ಟುಕೊಂಡು ಅವರು ಸಿದ್ಧಪಡಿಸಿದರು. ತಮ್ಮ ವಿರಾಮಸಮಯವನ್ನೆಲ್ಲಾ ಕನ್ನಡ ಸಾಹಿತ್ಯದ ಹಲವು ಹಳೆಯ ಗ್ರಂಥಗಳ ಸಂಪಾದನೆಗಾಗಿ ಕಳೆದರು. ವಿಮರ್ಶಾತ್ಮಕ ಸಂಶೋಧನೆ ಅವರ, ವಿಶೇಷ ಒಲವುಗಳಲ್ಲೊಂದಾಗಿತ್ತು.
ಜಯದೇವಿತಾಯಿ ಲಿಗಾಡೆಯವರ ಆದೇಶದಂತೆ, ರೆ. ಫಾದರ್ ಚನ್ನಪ್ಪನವರು, ಸಿದ್ಧರಾಮ ಸಾಹಿತ್ಯವನ್ನು ಸಂಗ್ರಹಿಸಿ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅದಕ್ಕಾಗಿ ತಿಂಗಳಿಗೆ ೧೦೦ ರೂಪಯಿ ಗೌರವಧನವನ್ನು ಸ್ವೀಕರಿಸಲು ಒಪ್ಪಿಕೊಂಡರು. ಅದರೆ, ಕಾಯಿಲೆ ಬಿದ್ದರು. ತಾಯಿಯವರು ಹಣಕಳಿಸಿದಾಗ ಸ್ವೀಕರಿಸದೇ ಬಲವಂತದಿಂದ ಒಪ್ಪಿಸಬೇಕಾಯಿತು. ನಾಡಿನುದ್ದಕ್ಕೂ ತಿರುಗಾಡಿ, ಸುಮಾರು ೨೦ ಕೈಬರಹಗಳ ಪ್ರತಿಗಳನ್ನು ಸಂಗ್ರಹಿಸಿದರು. ಒಟ್ಟು ೨,೦೦೦ ವಚನಗಳು. ಅವರಿಗೆ ತತ್ವಶಾಸ್ತ್ರ, ಪ್ರಿಯ. ವಿದೇಶಿ ಮತ್ತು ಭಾರತೀಯ. ಉಪನಿಷತ್ತು, ಭಗವದ್ಗೀತೆ, ಮುಂತಾದ ಉದ್ಗ್ರಂಥಗಳನ್ನು ಓದಿದರು. ಆ ಸಮಯದಲ್ಲಿ ತಂದೆ ತೀರಿಕೊಂಡರು. ತಾವು ಕೂಡ ಭಯಂಕರೋಗಕ್ಕೆ ತುತ್ತಾದರು. ೬ ವರ್ಷಗಳ ಬಳಿಕ ಗುಣವಾಯಿತು. ಹಸ್ತಪ್ರತಿ ಸಿದ್ಧವಾಯಿತು. ಆದರೆ ಅಚ್ಚುಮಾಡಲು ಹಣವಿಲ್ಲ. ಸುದೀರ್ಘಮುನ್ನುಡಿ ಬರೆದರು. ಧಾರವಾಡದ ಕರ್ನಾಟಕ ಪ್ರಿಂಟಿಂಗ್ ಪ್ರೆಸ್,ನ ಮಾಲೀಕ,ಯಶವಂತರಾವ್ ಜಥಾರರು, ಪುಸ್ತಕವನ್ನು ಪ್ರಕಟಿಸಲು ಒಪ್ಪಿದರು. ಮೊದಲು ೫೦೦ ರೂಪಾಯಿ ಸಾಲಮಾಡಬೇಕಾಯಿತು. ಆ ಸಮಯಕ್ಕೆ ಅವರಿಗೆ ಹಾವೇರಿಗೆ ವರ್ಗವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಬಂತು. ಚನ್ನಪ್ಪನವರ ಸಾಹಿತ್ಯಕೃಷಿಯನ್ನು ಅಭಿನಂದಿಸಿ ಅಲ್ಲಿನ ಹಿರಿಯ ಸಾಹಿತಿಗಳು ತಮ್ಮ ಕೈಲಾದ ಸಹಾಯಮಾಡುವುದಾಗಿ ಭರವಸೆಕೊಟ್ಟರು. ಗರೂಡ ಸದಾಶಿವರಾಯರು, ತಮ್ಮ ನಾಟಕ ಪ್ರದರ್ಶನದ ಒಂದು ಪ್ರದರ್ಶನದ, ೩೦೦ ರೂಪಾಯಿ ಹಣವನ್ನು ಕಾಣಿಕೆಯಾಗಿ ತಂದುಕೊಟ್ಟರು. ಉಳಿದ ಮೊತ್ತವನ್ನು ಹೇಗೋ ಹೊಂದಿಸಿ, ರೆ. ಫಾದರ್ ಉಚ್ಚಂಗಿಯವರು, ಋಣಮುಕ್ತರಾಗಿ, ಧಾರವಾಡದಿಂದ ಹಾವೇರಿಗೆ ಹೋದರು.
[ಬದಲಾಯಿಸಿ] ಪ್ರಶಸ್ತಿಗಳು ಮತ್ತು ಗೌರವ
೧೯೪೯ ರಲಿ, ಕಲ್ಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೆ. ಫಾದರ್ ಉತ್ತಂಗಿ ಬಸಪ್ಪನವರು,ಆಯ್ಕೆಯಾಗಿದ್ದರು. ಚರ್ಚಿನ ಭರತೀಕರಣದ ಬಗ್ಗೆ ತೀವ್ರವಾಗಿ ಹೋರಾಡಿದರು. ತಮ್ಮ ಹೆಂಡತಿ ೨೫ ವರ್ಷಗಳ ಕಾಲ ತೀವ್ರವಾಗಿ ಅಸ್ವಸ್ಥರಾಗಿದ್ದು ಹಾಸಿಗೆ ಹಿಡಿದಿದ್ದರು. ಅದನ್ನು ತಲೆಗೆ ಹಾಕಿಕೊಳ್ಳದೆ, ಶ್ರದ್ಧೆಯಿಂದ ಕೆಲಸಮಾಡಿದರು. ಚನ್ನಪ್ಪನವರು ಹಾಸ್ಯಪ್ರಿಯರು ಕೂಡ. ತೀಕ್ಷ್ಣಮತಿತ್ವ, ವಿಮರ್ಷನಾತ್ಮಕ ದೃಷ್ಟಿಕೋನ, ಹೊಸ-ವಿಷಯಗಳನ್ನು ತಿಳಿಯುವ ಕುತೂಹಲ, ಉಜ್ವಲರಾಷ್ಟ್ರಪ್ರೇಮ, ಸಮಾಜದ ಹಿತಚಿಂತನೆಗಳು , ಅವರನ್ನು ತಮ್ಮ ಕೆಲಸ ಸಾಧನೆಯ ಯಶಸ್ಸಿನಲ್ಲಿ ಮೇಲೆತ್ತಲು ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದವು. ೩೩ ವರ್ಷ ಸತತವಾಗಿ ದುಡಿದರು. ಕೊನೆ-ಕೊನೆಯಲ್ಲಿ ಆರೋಗ್ಯ ಚೆನ್ನಾಗಿರಲಿಲ್ಲ. ಜೀವನದ ಸಂಕಷ್ಟಮರೆತು ತಮ್ಮನ್ನು ಕನ್ನಡ ಸಾಹಿತ್ಯಕ್ಕೆ, ಮುಡುಪಾಗಿಟ್ಟರು. ಬಾಸೆಲ್ ಚರ್ಚಿನ ಭಾರತೀಕರಣ,ಮತ್ತು ಭಾರತದ ಸ್ವಾತಂತ್ರ್ಯ, ಇವರ ಕನಸುಗಳು. ಅವರ ಜೀವಿತದ ಸಮಯದಲ್ಲೇ ಈ ಎರಡೂ ಕನಸುಗಳು ನನಸಾದವು. ಕಾಲಕಳೆದಂತೆ, ಕಡೆಗೊಂದು ದಿನ, ಮಿತ್ರ ಕೊನೆಸಗ್ರ, ರವರು ನೋಡುತ್ತಿದ್ದಂತೆ, "ಹೇ ಪ್ರೇಮಸ್ವರೂಪಿ " ಎಂದು ದೇವರನ್ನು ಸ್ಮರಿಸಿ, ಕಣ್ಣುಮುಚ್ಚಿದರು.
ರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರ ಪ್ರಕಟಣೆಗಳು :
೧. ಸರ್ವಜ್ಞ.
೨. ಸಿದ್ಧರಾಮ ಸಾಹಿತ್ಯ ಸಂಗ್ರಹ, ಬಸವೇಷ್ವರ.
೩. ಆತ್ಮ ಚರಿತ್ರೆ.
೪. ಕ್ರೈಸ್ತ, ವೀರಶೈವಧರ್ಮದ ಒಟ್ಟು ೧೬ ಪುಸ್ತಕಗಳನ್ನು ಬರೆದರು.
೫. ಕ್ರೈಸ್ತಧರ್ಮದ ಹಿರಿಯರನ್ನು ಕುರಿತ ಪುಸ್ತಕ.
-ಸದಾಶಿವ ಒಡೆಯರ, ಪ್ರೊ. ಎಲ್. ಎಸ್. ಎಸ್, ಶೇಷಗಿರಿರಾಯರ ಕಿರು ಪುಸ್ತಕಗಳಿಂದ. ೧೯೭೬.
ಇವರ ಇತರ ಸಂಶೋಧನಾ ಕೃತಿಗಳು ಇಂತಿವೆ:
- ಸಿದ್ಧರಾಮ ಸಾಹಿತ್ಯ ಸಂಗ್ರಹ
- ಮೋಳಿಗೆ ಮಾರಯ್ಯನ ವಚನಗಳು
- ರಾಣಿ ಮಹಾದೇವಿಯ ವಚನಗಳು
- ಆರಯ್ಯನ ವಚನಗಳು
- Heart of Lingayat Religion
ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿದೆ.
ಉತ್ತಂಗಿ ಚನ್ನಪ್ಪನವರು ೧೯೪೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.