ಎನ್.ನರಸಿಂಹಯ್ಯ
From Wikipedia
ಎನ್.ನರಸಿಂಹಯ್ಯನವರನ್ನು ಕನ್ನಡದಲ್ಲಿಯ ಪತ್ತೇದಾರಿ ಕಾದಂಬರಿಗಳ ಜನಕನೆನ್ನಬಹುದು.ಇವರು ೧೯೨೫ ಸಪ್ಟೆಂಬರ್ ೧೮ ರಂದು ಬೆಂಗಳೂರಿನಲ್ಲಿ ಜನಿಸಿದರು. ೧೯೩೬ನೆಯ ಇಸವಿಯಲ್ಲಿ ಇವರು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವಾಗಲೆ ಇವರ ತಂದೆ ತೀರಿಕೊಂಡರು. ಇವರಿಗೆ ಆಶ್ರಯ ನೀಡಿದ ಚಿಕ್ಕಪ್ಪ ಮುಂದೆ ಒಂದೇ ವರ್ಷದಲ್ಲಿ ತೀರಿಕೊಂಡರು.
ಇಲ್ಲಿಗೆ ಇವರ ವಿದ್ಯಾಭ್ಯಾಸವು ಮುಕ್ತಾಯಗೊಂಡು ಇವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರಿಗೆ ತೆರಳಿದರು. ೧೯೩೮ರಲ್ಲಿ, ತಮ್ಮ ೧೩ನೆಯ ವರ್ಷದಲ್ಲಿಯೆ ಎನ್.ನರಸಿಂಹಯ್ಯನವರು ಹೊಟ್ಟೆಪಾಡಿಗಾಗಿ ಸಿಂಪಿಗ ವೃತ್ತಿಯನ್ನು ಕೈಕೊಂಡರು.ಒಂದು ವರ್ಷದ ಬಳಿಕ ಆ ಕೆಲಸ ಬಿಟ್ಟು ಕೈಗಾರಿಕಾ ಪಾಠಶಾಲೆಯಲ್ಲಿ ೩ ವರ್ಷಗಳ ತರಬೇತಿಗೆ ಸೇರಿಕೊಂಡರು. ೧೯೪೨ರಲ್ಲಿ ಬಸ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡವರು ೧೯೪೪ರಲ್ಲಿ ಬಸ್ ಕಂಡಕ್ಟರ್ ಆದರು. ೧೯೪೭ರಲ್ಲಿ ನಾಗರತ್ನಮ್ಮನವರ ಜೊತೆ ಇವರ ಮದುವೆಯಾಯಿತು. ೧೯೪೮ರಲ್ಲಿ ಚಿಕ್ಕಮಗಳೂರು ಬಿಟ್ಟು ಬೆಂಗಳೂರಿಗೆ ಬಂದು ಲಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿರುವಾಗಲೆ ಬಾಡಿಗೆ ಮನೆಯಲ್ಲಿಯೆ ವಾಚನಾಲಯ ಪ್ರಾರಂಭಿಸಿ ಬಾಲಸರಸ್ವತಿ, ವೆಂಕಟಾಚಾರ್ಯ ಗುರುರಾಜಾಚಾರ್ಯ, ಗುಂಡಾಶಾಸ್ತ್ರಿ ಮೊದಲಾದವರ ಪತ್ತೇದಾರಿ ಕಾದಂಬರಿಗಳನ್ನು ಓದತೊಡಗಿದರು.
೧೯೫೨ರಲ್ಲಿ ಎನ್.ನರಸಿಂಹಯ್ಯನವರು ತಮ್ಮ ಪ್ರಥಮ ಪತ್ತೇದಾರಿ ಕಾದಂಬರಿ ಪತ್ತೇದಾರ ಪುರುಷೋತ್ತಮ ಬರೆದರು. ಅದನ್ನು ಪ್ರಕಟಿಸಿದವರು ಟಿ. ನಾರಾಯಣ ಅಯ್ಯಂಗಾರ.ಇಲ್ಲಿಯವರೆಗೆ ಎನ್.ನರಸಿಂಹಯ್ಯನವರು ಮುನ್ನೂರೈವತ್ತಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಐವತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳನ್ನೂ ನೀಡಿದ್ದಾರೆ.ಐವತ್ತು / ಅರವತ್ತರ ದಶಕದಲ್ಲಿ ಹದಿಹರೆಯದ ಹುಡುಗರು ಕನ್ನಡ ಪುಸ್ತಕ ಓದುವ ಹವ್ಯಾಸ ಪ್ರಾರಂಭಿಸುತ್ತಿದ್ದದೇ ನರಸಿಂಹಯ್ಯನವರ ಕಾದಂಬರಿಗಳಿಂದ ಎಂದರೆ ಅತಿಶಯೋಕ್ತಿಯಲ್ಲ.
ಎನ್.ನರಸಿಂಹಯ್ಯನವರಿಗೆ ೧೯೯೨ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಅದೇ ವರ್ಷ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. ೧೯೯೭ ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಬಿಸಿತು.