ಜಯದೇವಿತಾಯಿ ಲಿಗಾಡೆ
From Wikipedia
ಜಯದೇವಿತಾಯಿ ಲಿಗಾಡೆ - ಕನ್ನಡದ ಹಾಗು ಮರಾಠಿ ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು.
ಜಯದೇವಿ ತಾಯಿಯವರು ೧೯೧೨, ಜೂನ್ ೨೩ರಂದು ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರದಲ್ಲಿ ಜನಿಸಿದರು. ತಂದೆ ಮಡಿಕೆ ಚನ್ನಬಸಪ್ಪ, ತಾಯಿ ಸಂಗಮ್ಮ. ಮಾತೃಭಾಷೆ ಕನ್ನಡವಾದರೂ ಸಹ, ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇಲ್ಲದ್ದರಿಂದ ಮರಾಠಿಯಲ್ಲಿಯೆ ಶಿಕ್ಷಣ ಪಡೆದರು. ತಮ್ಮ ಹದಿನಾಲ್ಕನೆಯ ವಯಸ್ಸಿಗೆ ಲಿಗಾಡೆ ಚನ್ನಮಲ್ಲಪ್ಪ ಎಂಬುವರ ಜೊತೆಗೆ ಮದುವೆಯಾದರು. ಐದು ಮಕ್ಕಳ ತುಂಬು ಸಂಸಾರ ನಡೆಯಿಸುತ್ತಿರುವಾಗಲೆ, ಆಕಸ್ಮಿಕವಾಗಿ ೧೯೪೬ರಲ್ಲಿ ಪತಿಯನ್ನು ಕಳೆದುಕೊಂಡರು.
ಜಯದೇವಿ ತಾಯಿಯವರು ಕನ್ನಡ ಹಾಗು ಮರಾಠಿ ಎರಡೂ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಜಯಗೀತ, ಸಿದ್ಧರಾಮ, ತಾರಕತಂಬೂರಿ, ಶ್ರೀ ಸಿದ್ಧರಾಮೇಶ್ವರ ಪುರಾಣ ಇವು ಕನ್ನಡ ಕೃತಿಗಳು. ಸಿದ್ಧವಾಣಿ, ಬಸವದರ್ಶನ, ಮಹಾಯೋಗಿನಿ, ಸಿದ್ಧರಾಮಾಂಚೆ ತ್ರಿವಿಧಿ, ಸಮೃದ್ಧ ಕರ್ನಾಟಕಾಚೆ ರೂಪರೇಷಾ, ಬಸವ ವಚನಾಮೃತ ಇವು ಮರಾಠಿ ರಚನೆಗಳು. ತೋಂಟದ ಸಿದ್ಧಲಿಂಗೇಶ್ವರರ ವಚನಗಳನ್ನೂ ಇವರು ಮರಾಠಿಗೆ ಅನುವಾದಿಸಿದ್ದಾರೆ.
ಶ್ರೀ ಸಿದ್ಧರಾಮೇಶ್ವರ ಪುರಾಣವು ೧೨ನೆಯ ಶತಮಾನದ ವಚನಕಾರ ಸೊನ್ನಲಿಗೆ ಸಿದ್ಧರಾಮನ ಜೀವನ ಚಿತ್ರವಾಗಿದೆ. ಇದರಲ್ಲಿ ನಲವತ್ತೊಂದು ಸಂಧಿಗಳಿದ್ದು ೪೧೦೦ ತ್ರಿಪದಿಗಳಿವೆ. ಸಿದ್ಧರಾಮೇಶ್ವರ ಪುರಾಣಕ್ಕೆ ೧೯೬೮ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಜಯದೇವಿತಾಯಿಯವರು ೧೯೫೦ರಲ್ಲಿ ಮುಂಬಯಿಯಲ್ಲಿ ನಡೆದ ಮೂವತ್ತೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ೧೯೭೪ರಲ್ಲಿ ಮಂಡ್ಯದಲ್ಲಿ ನಡೆದ ೪೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೊಲ್ಲಾಪುರದಲ್ಲಿ ಕನ್ನಡ ಕೋಟೆ ಎಂಬ ಬಳಗವನ್ನು ಕಟ್ಟಿ ಕನ್ನಡದ ಸೇವೆ ಮಾಡುತ್ತಿದ್ದರು.
[ಬದಲಾಯಿಸಿ] ನಿಧನ
ಜಯದೇವಿತಾಯಿ ಲಿಗಾಡೆಯವರು ೧೯೮೬ , ಜುಲೈ ೨೫ ರಂದು ಸೊಲ್ಲಾಪುರದಲ್ಲಿ ನಿಧನ ಹೊಂದಿದರು.