ಕಿಟ್ಟೆಲ್

From Wikipedia

ಕಿಟ್ಟೆಲ್
ಕಿಟ್ಟೆಲ್


ರೆ. ಫರ್ಡಿನ್ಯಾಂಡ್ ಕಿಟ್ಟೆಲ್ .(೧೮೩೨-೧೯೦೩)


ಅವರ ಆದ್ಯ ಕರ್ತವ್ಯ ಮತಪ್ರಚಾರವಾದಾಗ್ಯೂ, ತಮ್ಮ ಮಾವವೀಯ ಮೌಲ್ಯಗಳ ಗಣಿಯಾಗಿದ್ದರು. ಕಿಟ್ಟಲ್ ರವರು, ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಯೂರೋಪಿಯನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರಿಗೆ, ದೂರದ ಭಾರತದ, ಧಾರವಾಡದ ಪರಿಸರ, ನಿಸರ್ಗಸೌಂದರ್ಯ, ಅಲ್ಲಿನ ಮುಗ್ಧಜನರ ಭಾಷೆ, ಸರಳ ಆಚಾರವ್ಯವಹಾರ, ಉಡುಗೆ-ತೊಡಿಗೆಗಳು, ಕಿಟ್ಟೆಲ್ಲರನ್ನು ಸಂಭ್ರಮಿಸಿರಬೇಕು ! ಕನ್ನಡ ಭಾಷೆಯನ್ನಂತೂ ಅವರು ತುಂಬಾ ಹಚ್ಚಿಕೊಂಡಿದ್ದರು. ಭಾರತದ ಜನತೆಗೆ ಮೊದಲು ವಿದೇಶಿಯರಂತೆ ತೋರಿದರೂ, ಅವರು ತಮ್ಮ ತಾಯ್ನಾಡಿಗೆ ವಾಪಸ್ ಹೋಗುವ ಹೊತ್ತಿಗೆ, ಅವರು ನಮ್ಮವರಲ್ಲಿ ಒಬ್ಬರಾಗಿಹೋಗಿದ್ದರು ! ಇದಕ್ಕೆ ಕಾರಣ, ಕಿಟ್ಟೆಲ್ಲರ ಅಪಾರ ಕನ್ನಡನಾಡಿನ ಭಾಷೆಯ ಬಗ್ಗೆ ಇದ್ದ ಅನುಭೂತಿ, ವಿಶ್ವಾಸ ಪ್ರೀತಿ. ಕನ್ನಡ ನುಡಿಯ ಸಂವರ್ಧನೆಗೆ ಅವರು ಮಾಡಿದ ಕಾರ್ಯ, ಸೇವೆ ಅನನ್ಯ  ! ನಮ್ಮ ವರಕವಿ, ದಾ. ರಾ. ಬೇಂದ್ರೆಯವರ ಮಾತಿನಲ್ಲಿ ಹೇಳಬೇಕೆಂದರೆ, " ಕನ್ನಡಕೆ ಕನ್ನಡಿಯ ಹಿಡಿದು, ದುಡಿದವ ನೀನು," ಎಂದಿದ್ದಾರೆ. ಇದಕ್ಕಿಂತ ಉತ್ತಮ ಮಾತು ಹೇಳಲು ಸಾಧ್ಯವೇ  ?


ಈತ ಜನಿಸಿದ್ದು, ೧೮೩೨ ರಲ್ಲಿ. ಜರ್ಮನಿಯ ಪೂರ್ವೋತ್ತರಸಾಗರದ ತೀರದಲ್ಲಿರುವ ಫ್ರೀಸ್ಲ್ಯಾಂಡ್ ನಲ್ಲಿ. ಇದು ಹ್ಯಾನೋವರ್ ಪ್ರಾಂತ್ಯದಲ್ಲಿದೆ. ಫಾಸ್ಟರ್ ತಂದೆ, ಗಾಜ್ ಫ್ರೀಟ್, ಪಾದ್ರಿಯಾಗಿದ್ದರು. ತಾಯಿ, ಟ್ಯುಡೋವ್ ಹೆಲೇನ್ ಹ್ಯೂಬರ್ಟ್. ಕಿಟ್ಟೆಲ್ ಇವರ ೬ ಜನಮಕ್ಕಳಲ್ಲಿ ಹಿರಿಯವರು. ಇವರು ಭಾರತಕ್ಕೆ ಬಂದಾಗ, ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಇಂಗ್ಲೀಷ್ ಕಲಿತುಕೊಂಡಿದ್ದರು. ಕನ್ನಡವನ್ನು ಕಲಿಯಲು ಅವರಿಗೆ ಅಪಾರ ಆಸೆ.


ಬಾಲ್ಯ, ಮತ್ತು ಶಿಕ್ಷಣ  :


೧೮೪೧ ರಿಂದ ೧೮೪೯ ರವರೆಗೆ ಮಧ್ಯಮಿಕ ಶಿಕ್ಷಣವನ್ನು ಕಲಿತರು. ೧೮೪೯, ಆಗಸ್ಟ್, ೩೦ ಬಾಸೆಲ್ ಮಿಶನ್ ಸಂಸ್ಥೆಯ, ಮಿಶನರಿ ಶಿಕ್ಷಣಕ್ಕೆ ಕಿಟ್ಟೆಲ್ಲರ ಪರವಾಗಿ ಅವರ ತಂದೆ, ಅರ್ಜಿ ಗುಜರಾಯಿಸಿದ್ದರು. ೧೮೫೦ ರಲ್ಲಿ ಮಿಶನರಿ ಕಾಲೇಜಿಗೆ ಸೇರಿದರು. ಬಾಸೆಲ್ ಮಿಶನ್ ನವರು, ೧೮೫೩ ರಲ್ಲಿ ಕಾಪ್ ಮನ್, ಮತ್ತು ಕಿಟ್ಟೆಲ್ ರನ್ನು ದಕ್ಷಿಣಭಾರತದ ಧಾರ್ವಾಡಪಟ್ಟಣಕ್ಕೆ ಮತಪ್ರಚಾರಕ್ಕಾಗಿ ಕಳಿಸಿಕೊಟ್ಟರು. ಆಗ, ರೆ.ವೀಗಲ್ ಎಂಬ ಬ್ರಿಟಿಶ್ ಅಧಿಕಾರಿ ಧಾರವಾಡದಲ್ಲಿದ್ದರು. ಅವರು ಕನ್ನಡ ಸಾಹಿತ್ಯಾಭ್ಯಾಸವನ್ನುಮಾಡಿ ಆ ವಲಯದಲ್ಲಿ ಹೆಸರುವಾಸಿಯಾಗಿದ್ದರು. ಕಿಟ್ಟೆಲ್ ರಿಗೆ ಅವರನ್ನು ಭೇಟಿಮಾಡುವ ಕುತೂಹಲ. ಆದರೆ ಅವರ ಬದಲು ಇನ್ನೊಬ್ಬ ಅಧಿಕಾರಿ, ಕೆ. ಮೋರಿಕ್ ರ ಪರಿಚಯವಾಯಿತು. ಮೊದಲು ಧಾರವಾಡದ ಸುತ್ತಮುತ್ತಲಿನ, ದೇಸಿ ಭಾಶೆಗಳನ್ನು ಅರಿಯಲು ಕಿಟ್ಟೆಲ್, ಕಾಲುನಡಿಗೆಯಲ್ಲೇ ಹಳ್ಳಿಗಾಡುಗಳಲ್ಲಿ, ಗುಡ್ಡಗಾಡುಗಳಲ್ಲಿ, ನಿರ್ಗಮ ಕಾಡು-ಮೇಡುಗಳಲ್ಲಿ ಊರೂರು ಅಲೆದು, ಆ ಪ್ರದೇಶಗಳ ಆಡುಭಾಷೆಯ ಪರಿಚಯಮಾಡಿಕೊಂಡರು. ಹೀಗೆ ಶ್ರಮಪಟ್ಟು ಕನ್ನಡವನ್ನು ಕಲಿತ ಕೇವಲ ೧೩ ವರ್ಷಗಳಲ್ಲೇ, " ಹಳಗನ್ನಡ ವ್ಯಾಕರಣ ಸೂತ್ರಗಳೆಂಬ," ಗ್ರಂಥ ಪ್ರಕಟಣೆ ಮಾಡುವ ಸಾಹಸ ಮಾಡಿದರು. ಕನ್ನಡಭಾಷೆಯ ಜೊತೆಜೊತೆಗೆ, ಸಂಸ್ಕೃತವನ್ನೂ ಕಲಿತರು.

೧೮೬೨ ರಲ್ಲಿ ಬೈಬಲ್ಲಿನ ಹೊಸಒಡಂಬಡಿಕೆಯನ್ನು ಕನ್ನಡಕ್ಕೆ,ತಂದರು. ೧೮೬೩ ರಲ್ಲಿ, "ಕಥಾಮಾಲಿಕೆ" ಪ್ರಸಿದ್ಧಿಪಡಿಸಿದರು. ೧೮೬೫ ರಲ್ಲಿ," ಸಣ್ಣ ಕರ್ನಾಟಕ ಕಾವ್ಯಮಾಲೆ" ಪದ್ಯಸಂಗ್ರಹ, ಬೆಳಕಿಗೆ ಬಂತು. ಇದೇ ಮುಂದೆ, " ಕರ್ನಾಟಕ ಕಾವ್ಯಮಾಲೆ, "ಎಂದು ಪ್ರಕಟಗೊಂಡು ಹಲವಾರು ಆವೃತ್ತಿಗಳ ಬೆಳಕುಕಂಡಿತು. ವಿಶೇಷವೆಂದರೆ, ಈ ಕೃತಿ ಮುನ್ನುಡಿ ಮತ್ತು, ಸಹಾಯಟಿಪ್ಪಣಿಗಳನ್ನು ಒಳಗೊಂಡಿದೆ.


ಕನ್ನಡ ಪತ್ರಿಕೆಯ ಸಂಪಾದನೆ :


ಆಗಿನ ಬೊಂಬಾಯಿಪ್ರಾಂತ್ಯದಿಂದ ಕನ್ನಡಿಗರ ಪರವಾಗಿ, " ವಿಚಿತ್ರವರ್ತಮಾನ ಸಂಗ್ರಹ" ವೆಂಬ ಪತ್ರಿಕೆ, ಕನ್ನಡ ಮತ್ತು ಆಂಗ್ಲಭಾಷೆಗಳ್ಲಿ ಪ್ರಕಟವಾಗುತ್ತಿತ್ತು. [ತಿಂಗಳಿಗೆ ೨ ಬಾರಿ] ಈ ಪತ್ರಿಕೆಯ ಸಂಪಾದನೆಯನ್ನು ೧೮೬೨ ರಲ್ಲಿ, ಕಿಟ್ಟೆಲ್ಲರೂ, ೧೮೬೩ ರಲ್ಲಿ ಕ್ರಮವಾಗಿ, ಜೆ. ಮ್ಯಾಕ್ ರವರು ವಹಿಸಿಕೊಂಡು ಕೆಲಸಮಾಡಿದರು. ೧೮೬೪ ರಲ್ಲಿ ಕನ್ನಡ ಪಾಠಗಳ ೩ ನೆಯ ಪುಸ್ತಕವನ್ನು ಹೊರತಂದರು. ಅದರಲ್ಲಿ ಇಂಗ್ಲೆಂಡ್ ದೇಶದ ಚರಿತ್ರೆಯ ಭಾಗವನ್ನೂ, ಮಕ್ಕಳಿಗೆ ಪರಿಚಯಿಸುವ ಪ್ರಯತ್ನಮಾಡಿದರು.

ಕನ್ನಡಶಾಲೆಯ ಸ್ಥಾಪನೆ ಧಾರವಾಡದಲ್ಲಿ ೧೮೩೧ ರಲ್ಲೇ ಆಗಿದ್ದರೂ, ಇಂಗ್ಲಿಷ್ ಶಾಲೆಯ ಸ್ಥಾಪನೆ ಮೊಟ್ಟಮೊದಲು, "ಬಾಸೆಲ್ ಮಿಶನ್" ನವರ ಸಹಕಾರದಿಂದ ಆಯಿತು. ಕನ್ನಡ ಭಾಷೆಯಬಗ್ಗೆ ಒಲವಿದ್ದ ಅನೇಕ ಬ್ರಿಟಿಷ್ ಅಧಿಕಾರಿಗಳಾದ, ರಸೆಲ್, ಫ್ಲೀಟ್, ಮತ್ತು ಬಿ. ಎಲ್. ರೈಸ್ ಪ್ರಮುಖರು. ಇವರೆಲ್ಲಾ ಕಿಟ್ಟೆಲ್ಲರ ಭಾಷಾ ಪ್ರಸಾರ ದಲ್ಲಿ ನೆರವಾದರು.


ಕಿಟ್ಟೆಲ್ಲರ ವೈವಾಹಿಕ ಜೀವನ :


ಮಂಗಳೂರಿನ ಪಾಲಿನ್ ಐತ್, ಎಂಬ ಹುಡುಗಿಯನ್ನು ಮದುವೆಯಾಗಿ ೨ ಮಕ್ಕಳನ್ನು ಪಡೆದರು. ಆದರೆ ಕೇವಲ ೪ ವರ್ಷದ ವೈವಾಹಿಕಜೀವನದ ಅಂತ್ಯದಲ್ಲೇ, ಆಕೆ ಮೃತರಾದರು. ಎರಡನೇ ಮದುವೆ, ಜರ್ಮನಿಯಲ್ಲಿ ಜರುಗಿತು. ಈ ಬಾರಿ, ಪಾಲಿನ್ ಐತ್ ರ ತಂಗಿ, ಜ್ಯೂಲಿಯವರ ಜೊತೆಗೆ. ಇವರ ವೈವಾಹಿಕ ಜೀವನದಲ್ಲಿ ೩ ಗಂಡು ಮಕ್ಕಳು ಮತ್ತು ೧ ಹೆಣ್ಣುಮಗುವಿನ ಸೇರಿಕೆಯಾಯಿತು.


ಕಿಟ್ಟೆಲ್ಲರ್ ಜೀವನದ ಮಹತ್ವದ ದಿನಗಳು, ೧೮೭೨ ರ ನಂತರ :


೧೮೬೭ ರಲ್ಲಿ, ತಾಯ್ನಾಡಿನಿಂದ ಮರಳಿ ಧಾರವಾಡಕ್ಕೆ ಆಗಮನ. ೧೮೭೨ ರಲ್ಲಿ, " ಇಂಡಿಯನ್ ಅಂಟಿಕ್ವಿಟಿ ", ಎಂಬ ಪತ್ರಿಕೆ ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಕನ್ನಡದ ಬಗ್ಗೆ, ಆಂಗ್ಲ ಭಾಷೆಯಲ್ಲಿ ಬರೆದ ಲೇಖನಗಳ ಸಂಕಲನ. ಕೇಶಿರಾಜನು ೧೮೭೨ ರಲ್ಲಿ ಬರೆದ, " ಶಬ್ದಮಣಿದರ್ಶನ," ವೆಂಬ ಗ್ರಂಥದ ಸಂಪಾದನೆ, ಮತ್ತು ಪುನಃಪ್ರಕಟಣೆ ಯನ್ನು ಮಾಡಿದರು. ’ಕೇಶಿರಾಜನ ” ಬಗ್ಗೆ ಬರೆದ ಪ್ರಥಮ ಪರಿಷ್ಕೃತ ಲೇಖನ. ಈ ಪುಸ್ತಕವನ್ನು ಆಗಲೇ ಜೆ. ಗ್ಯಾರೆಟ್, ಎಂಬುವರು ೧೮೬೮ ರಲ್ಲಿ ಬರೆದು ಪ್ರಕಟಣೆಮಾಡಿದ್ದರು. ಮತ್ತು ಇನ್ನಿಬ್ಬರು, ರೀವ್ ಮತ್ತು, ಗಿಲ್ಕ್ರಿಸ್ಟ್ -ಬೇರೆ-ಬೇರೆಯಾಗಿಯೇ ಕನ್ನಡ- ಇಂಗ್ಲೀಷ್ ಶಬ್ದಕೋಶಗಳ ರಚನೆಮಾಡಿದ್ದರು. ಆದರೆ, ಪಾಂಡಿತ್ಯಪೂರ್ಣ ಬರಹಕ್ಕೆ ಕಿಟ್ಟೆಲ್ ಹೆಸರುವಾಸಿಯಾಗಿದ್ದರು. ಕೇವಲ ಬರವಣಿಗೆಯಲ್ಲದೆ, ಎಲ್ಲಾ ಮನುಕುಲದ ಸೇವಾಕ್ಷೇತ್ರಗಳಲ್ಲೂ ಅವರು ಮುಂದಿದ್ದರು. ರೆ.ಎಫ್. ಕಿಟ್ಟೆಲ್ಲರು ’ಪಂಚತಂತ್ರ ”ದ ಬಗ್ಗೆಯೂ ಬರೆದಿದ್ದಾರೆ.


ಕಿಟ್ಟೆಲ್ಲರು ವ್ಯಾಕರಣ ಛಂದಸ್ಸಿಗೆ ಒತ್ತು ಕೊಟ್ಟಿದ್ದರು. ಕಿಟ್ಟೆಲ್ಲರು ಎಂದೆಂದಿಗೂ ಅವಿಸ್ಮರಣೀಯರಾಗಿರುವುದು ಅವರ ಕನ್ನಡ- ಇಂಗ್ಲೀಷ್ ನಿಘಂಟಿನಿಂದ ! ೧೮೭೨ ರಲ್ಲಿ ಸೂಕ್ಷ್ಮವಾಗಿ ಅದರ ರೂಪ-ರೇಷೆಗಳನ್ನು ತಯಾರಿಸಿದರು. ತಮ್ಮ ಅನವರತ ಅಭ್ಯಾಸ, ಪರಿಶ್ರಮಗಳಿಂದ ಮುಂದಿನ ೨೦ ವರ್ಷಗಳಲ್ಲಿ, ಅಂದರೆ, ೧೮೯೨ ರಲ್ಲಿ ಕನ್ನಡ ನಿಘಂಟನ್ನು ಪೂರ್ಣಗೊಳಿಸಿ, ಬಾಸೆಲ್ ಮಿಶನ್ ಗೆ ಒಪ್ಪಿಸಿದರು. ಕನ್ನಡಭಾಷೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದ ಬ್ರಿಟಿಷರಿಗೆ ಈ ಪ್ರಯತ್ನ ಬಹಳವಾಗಿ ಹಿಡಿಸಿತು. ಸರ್ ವಾಲ್ಟರ್ ಎಲಿಯೆಟ್ ಎಂಬ ಅಧಿಕಾರಿ, ಹಣದ ಸಹಾಯಕ್ಕೆ ಶಿಫಾರಿಸು ಮಾಡುವುದಾಗಿ ಆಶ್ವಾನೆಕೊಟ್ಟನು. ಆ ಸಮಯದಲ್ಲಿ ನಡೆದ ಯುದ್ಧದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮನವರು, ಇಲಿಯೆಟ್ ರವರನ್ನು ಸೆರೆಹಿಡಿದು, ಕರಾಗೃಹದಲ್ಲಿಟ್ಟರು.


ಜೈಲಿನಿಂದ ಬಿಡುಗಡೆಯಾದಮೇಲೆ, ಅವರು ಧಾರವಾಡದ ಸಹಾಯಕ ಕಲೆಕ್ಟರ್ ಆದರು. ಕನ್ನಡಕಾವ್ಯದ ಶೈಕ್ಷಣಿಕ ಪುನರ್ರಚನೆಯ ಪ್ರಯತ್ನ, ಕೈಗೊಳ್ಳಲಾಯಿತು. ೧೪ ಹಸ್ತಪ್ರತಿಗಳ ಸಹಾಯದಿಂದ ನಾಗವರ್ಮನ, " ಛಂದೋಂಭುದಿ ಸಂಗ್ರಹ," ೧೮೭೫ ರಲ್ಲಿ ಇದು ಅತ್ಯಂತ ಮಹತ್ವದ ಬೆಳವಣಿಗೆ. ಅವರು, ಗದಗ್, ಧಾರವಾಡ, ಮೈಸೂರು, ಕೊಡಗು, ಮಡಕೇರಿಗಳಲ್ಲಿ ಸುತ್ತಿ, ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಬಿ. ಎಲ್.ರೈಸ್ ಮತ್ತು ತಿರುಮಲೆ ಶಾಮಣ್ಣನವರ ಸಹಾಯ ಸಿಕ್ಕಿತು. ೧೮೨೪ ರಲ್ಲಿ ತಯಾರುಮಾಡಿದ ಕೆ. ವಿಲಿಯಮ್ ರೀವ್ ರವರ ಕನ್ನಡ ಶಬ್ದಕೋಶದಲ್ಲಿ ದೋಷಗಳು ಇದ್ದವು. ೧೮೬೮ ರಲ್ಲಿ ಧಾರವಾಡದ ಫಾ. ಜಿಗ್ಲರ್, ಕೂಡ ಅವರ ಶಬ್ದಕೋಶವನ್ನು ಮಂಡಿಸಿದ್ದರು. ೧೮೭೭ ರಲ್ಲಿ ಫ. ಕಿಟ್ಟೆಲರು ಜರ್ಮನಿಗೆ ಹೋದರು; ೧೮೯೨ ರಲ್ಲಿ ಮತ್ತೆ ಸಿದ್ಧ. ಆಗಲೇ ಈ ಮುತ್ಸದ್ಧಿಗೆ ೬೦ ವರ್ಷ. ಅವರು ಜರ್ಮನಿಗೆ ಹೋದರು. ಅಲ್ಲಿ ಟ್ಯುಬಿಂಗನ್ ವಿಶ್ವ ವಿದ್ಯಾಲಯದ ಬಳಿ ೧೮೯೩ ರಲ್ಲಿ ಮನೆಕಟ್ಟಿಸಿಕೊಂಡರು.


ಜೂನ್, ೬, ೧೮೯೬ ರಲ್ಲಿ ಜರ್ಮನಿಯ ಟ್ಯುಬಿಂಗನ್ ವಿಶ್ವ ವಿದ್ಯಾಲಯದ, ಅವರಿಗೆ " ಡಾಕ್ಟರೇಟ್ " ಕೊಟ್ಟು ಆದರಿಸಿತು. ಧಾರವಾಡದ ಜನತೆ ಆಗ ಎಚ್ಚೆತ್ತು, "ಕರ್ನಾಟಕ ವಿದ್ಯಾವರ್ಧಕ ಸಂಗಸಂಸ್ಥೆ " ಯ ವತಿಯಿಂದ ಗೌರವ [೧೮೯೦] ಸದಸ್ಯತ್ವವನ್ನು ಕೊಟ್ಟು ಆದರಿಸಿತು. ೧೯೦೩ ರಲ್ಲಿ, ರೆವರೆಂಡ್ ಎಫ್.ಕಿಟ್ಟೆಲ್ ತಮ್ಮ ತಾಯ್ನಾಡಿನಲ್ಲೆ ದೈವಾಧೀನರಾದರು. ಅವರು ತೀರಿಕೊಂಡ ೨೦ ವರ್ಷಗಳಾದಮೇಲೆ, ಅವರ ಪತ್ನಿ ಕೊನೆಯುಸಿರೆಳೆದರು. ಕನ್ನಡ ಭಾಷೆಯನ್ನು ಬೆಳೆಸಲು ಒಬ್ಬ ವಿದೇಶಿ ಪಾದ್ರಿ ಮಾಡಿದ ಸಾಧನೆ, ಒಂದು ಅಪೂರ್ವ ಸಂಗತಿಯಾಗಿದೆ.


೨೦೦೩ ರಲ್ಲಿ ಅವರ ’ಮರಣಶತಮಾನೋತ್ಸವ’ ದಿನವನ್ನು ಜರ್ಮನಿ ಮತ್ತು ಕರ್ನಾಟಕದಲ್ಲಿ ಆಚರಿಸಲಾಯಿತು. ಕಿಟ್ಟೆಲ್ಲರ ಕನ್ನಡಭಾಷೆಯ ಪ್ರೇಮ ಮತ್ತು ಅದನ್ನು ಕಾರ್ಯಗತಕೊಳಿಸಲು ಜೀವನವಿಡೀ ತಮ್ಮ ಅಮೂಲ್ಯ ಸಮಯವನ್ನು ಮುಡುಪಾಗಿಟ್ಟರು. ಆದಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೆ. ಕಿಟ್ಟಲ್ ರವರ ಕನ್ನಡ ಭಾಷೆಗೆ ಕೊಟ್ಟಸಂಪತ್ತುಗಳನ್ನು ಮನಸಾರೆ ನೆನೆಯಲಾಯಿತು. ಆ ಸಂದರ್ಭದಲ್ಲಿ ಬೆಂಗಳೂರಿನ ಮಹಾತ್ಮಾಗಂಧಿ ರಸ್ತೆಯ ಕೊನೆಯಲ್ಲಿ, ರೆ.ಕಿಟ್ಟಲ್ ರವರ ಮೂರ್ತಿಯನ್ನು ಸ್ಥಾಪಿಸಲಾಯಿತು. ಅದೂ ಅಲ್ಲದೆ , ಬೆಂಗಳೂರಿನ "ಆಸ್ಟಿನ್ ಟೌನ್," ಭಾಗವನ್ನು "ರೆ. ಕಿಟ್ಟಲ್ ನಗರ,"ವೆಂದು ಹೊಸದಾಗಿ ನಾಮಕರಣಮಾಡಲಾಯಿತು. ಇದು ಕರ್ನಾಟಕದ ಜನತೆ, ಕಿಟ್ಟಲ್ ರವರ ಜ್ಞಾಪಕಾರ್ಥವಾಗಿ ನೆರೆವೇರಿಸಿದ ಅನುಪಮ ಶ್ರದ್ಧಾಂಜಲಿಗಳು.


ಹಲವು ಗ್ರಂಥಗಳ ಸಂಪಾದನೆಗಳು :


೧. ಪ್ಯಾರಬಲ್ಸ್ ಇನ್ ಕೂರ್ಗ್ -೧೮೭೩ ರಲ್ಲಿ.


೨. ೨,೦೦೦ ಕನ್ನಡಗಾದೆಗಳ ಸಂಗ್ರಹ -೧೮೭೫ ರಲ್ಲಿ.


೩. ಎ. ಗ್ರಾಮರ್ ಆಫ್ ದ ಕನ್ನಡ ಲಾಂಗ್ವೇಜ್ -೧೮೯೪ ರಲ್ಲಿ.


-ವರದರಾಜ ಹುಯಿಲಗೋಳ, ಡಾ. ಎಲ್. ಎಸ್. ಎಸ್. ಪುಸ್ತಕ ಮಾಲೆಯ ಜನವರಿ, ೧೯೭೯ ರಲ್ಲಿ .

ಇತರ ಭಾಷೆಗಳು