ಶೃಂಗೇರಿ

From Wikipedia

ಶೃಂಗೇರಿಯ ಶ್ರೀಶಾರದಾಂಬೆ
ಶೃಂಗೇರಿಯ ಶ್ರೀಶಾರದಾಂಬೆ
ಶೃಂಗೇರಿಯ ಶ್ರೀವಿದ್ಯಾಶಂಕರ ದೇವಾಲಯ
ಶೃಂಗೇರಿಯ ಶ್ರೀವಿದ್ಯಾಶಂಕರ ದೇವಾಲಯ

ಶೃಂಗೇರಿ ಭಾರತಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ಪಟ್ಟಣ - ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಕ್ಷೇತ್ರ ಶೃಂಗೇರಿ. ಶಂಕರಾಚಾರ್ಯರು ಸ್ಥಾಪಿಸಿದ ಇತರ ಮಠಗಳು ಬದರಿನಾಥ, ಪುರಿ ಮತ್ತು ದ್ವಾರಕೆಗಳಲ್ಲಿವೆ. ಇದು ತುಂಗಾ ನದಿ ತಟದಲ್ಲಿರುವ ಚಿಕ್ಕ ಪಟ್ಟಣ. ಇದುಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿದೆ.

ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ - ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದದ್ದು. ಋಷ್ಯಶೃಂಗನ ಪ್ರಸ್ತಾಪ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ.

ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರ ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ. ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ.ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ.

ಶೃಂಗೇರಿ ಪಟ್ಟಣದಲ್ಲಿ ಮಲಹಾನಿಕರೇಶ್ವರ ದೇವಸ್ಥಾನ ಇದೆ. ಇದು ವಿಭಾಂಡಕ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವೆಂಬ ಪ್ರತೀತಿ ಇದೆ. ಶೃಂಗೇರಿಗೆ ೮ ಕಿ ಮೀ ಗಳ ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ ಈಶ್ವರನು ಋಶ್ಯಶೃಂಗರೆಂಬ ಋಷಿಯಲ್ಲಿ ಐಕ್ಯನಾದನೆಂಬ ಪ್ರತೀತಿ ಇದೆ.

ಶೃಂಗೇರಿ ತಾಲೂಕು ಕೊಪ್ಪ, ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಂದ ೮೯ ಕಿ ಮೀ ಗಳ ದೂರದಲ್ಲಿದೆ.

ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ ಹಾಗು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಕಾಫಿ , ಬಾಳೆ ,ವೆನಿಲ್ಲಾ, ವೀಳ್ಯದೆಲೆ, ಕರಿಮೆಣಸು ಮತ್ತು ಏಲಕ್ಕಿಯನ್ನು ಅಡಿಕೆಯೊಂದಿಗೆ ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.

ಪರಿವಿಡಿ

[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು

ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ.ಈ ಸ್ಥಳವನ್ನು ಶೃಂಗೇರಿಯಿಂದ ಕಿಗ್ಗಾ ಮಾರ್ಗವಾಗಿ ತಲುಪಬಹುದು.

ಮಘೇಬೈಲು ಜಲಪಾತ - ಇದು ಸಿರಿಮನೆ ಹತ್ತಿರ ಇರುವ ಇನ್ನೊಂದು ಜಲಪಾತ.

ಗಂಗಾಮೂಲ - ತುಂಗಾ ಹಾಗೂ ಭದ್ರಾ ನದಿಗಳ ಉಗಮ ಸ್ಥಾನ.

ನರಸಿಂಹ ಪರ್ವತ - ಚಾರಣಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.

[ಬದಲಾಯಿಸಿ] ಹೋಬಳಿಗಳು

[ಬದಲಾಯಿಸಿ] ತಲುಪಲು ಮಾರ್ಗಗಳು

  • ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಂದ ರಸ್ತೆ ಮಾರ್ಗವಾಗಿ ಆಲ್ದೂರು, ಬಾಳೆಹೊನ್ನೂರು, ಜಯಪುರ ಮೂಲಕ ಶೃಂಗೇರಿಗೆ ( ಸುಮಾರು ೯೦ ಕಿ. ಮೀ.).ಚಿಕ್ಕಮಗಳೂರಿನಂದ ಖಾಸಗಿ ಹಾಗು ಸರಕಾರಿ ಬಸ್ ಗಳ ನೇರ ಸಂಪರ್ಕವಿದೆ.
  • ಸಮೀಪದ ರೈಲ್ವೆ ನಿಲ್ದಾಣ ಕಡೂರಿನಿಂದ ಚಿಕ್ಕಮಗಳೂರು ಮೂಲಕ ಶೃಂಗೇರಿಗೆ ತಲುಪಬಹುದು.
  • ಉಡುಪಿಯಿಂದ ಹಿರಿಯಡಕ , ಹೆಬ್ರಿ, ಆಗುಂಬೆ , ಬಿದರಗೋಡು ಮಾರ್ಗವಾಗಿ ಶೃಂಗೇರಿಗೆ ತಲುಪಬಹುದು(ಅಂದಾಜು ೮೯ ಕಿ. ಮೀ.). ಉಡುಪಿಯಲ್ಲಿ ರೈಲ್ವೆ ನಿಲ್ದಾಣವಿದೆ.
  • ಶಿವಮೊಗ್ಗದಿಂದ ,ನರಸಿಂಹರಾಜಪುರ ,ಕೊಪ್ಪ ಮಾರ್ಗವಾಗಿ ಶೃಂಗೇರಿಗೆ ತಲುಪಬಹುದು(ಅಂದಾಜು ೧೦೫ ಕಿ. ಮೀ.).
  • ಸಮೀಪದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಇಲ್ಲಿಂದ ಮೂಡಬಿದಿರೆ, ಕಾರ್ಕಳ, ಕೆರೆಕಟ್ಟೆ ಮೂಲಕ ಶೃಂಗೇರಿಗೆ ರಸ್ತೆ ಸಂಪರ್ಕವಿದೆ (ಅಂದಾಜು ೧೧೬ ಕಿ. ಮೀ.).

[ಬದಲಾಯಿಸಿ] ಸಂಬಂಧಪಟ್ಟ ಲೇಖನಗಳು

[ಬದಲಾಯಿಸಿ] ಹೊರಗಿನ ಸಂಪರ್ಕಗಳು