ಕುಮಾರ ಗಂಧರ್ವ

From Wikipedia

ಕುಮಾರ ಗಂಧರ್ವ
Enlarge
ಕುಮಾರ ಗಂಧರ್ವ

೨೦ನೆಯ ಶತಮಾನದಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರತ್ನಪ್ರಾಯ ಸಂಗೀತಗಾರರಿಗೆ ಜನ್ಮ ನೀಡಿದ ಜಿಲ್ಲೆಯಾಗಿದೆ. ಇವರಲ್ಲಿ ಆರು ಸಂಗೀತಗಾರರಂತೂ ಅಖಿಲ ಭಾರತದಲ್ಲಿ ಸುಪ್ರಸಿದ್ಧರಾದವರು:

  • ೧. ಸವಾಯಿ ಗಂಧರ್ವ (೧೮೮೬-೧೯೫೨)
  • ೨. ಮಲ್ಲಿಕಾರ್ಜುನ ಮನಸೂರ (೧೯೦೧-೧೯೯೨)
  • ೩. ಗಂಗೂಬಾಯಿ ಹಾನಗಲ್ (೧೯೧೩-)
  • ೪. ಬಸವರಾಜ ರಾಜಗುರು (೧೯೧೭-೧೯೯೧)
  • ೫. ಭೀಮಸೇನ ಜೋಶಿ (೧೯೨೨-)
  • ೬. ಕುಮಾರ ಗಂಧರ್ವ (೧೯೨೪-೧೯೯೨)

ಕುಮಾರ ಗಂಧರ್ವರ ನಿಜವಾದ ಹೆಸರು ಶಿವಪುತ್ರ ಸಿದ್ದರಾಮಯ್ಯ ಕೋಂಕಾಳಿ. ೧೯೨೪ ಎಪ್ರಿಲ್ ೮ರಂದು ಇವರು ಧಾರವಾಡದಲ್ಲಿ ಜನಿಸಿದರು. ಬಾಲ್ಯದಲ್ಲಿಯೆ ಕ್ಷಯರೋಗದಿಂದ ಪೀಡಿತರಾದ ಇವರ ಒಂದು ಪುಪ್ಫುಸವು ನಿರುಪಯುಕ್ತವಾದದ್ದರಿಂದ ಇವರು ಒಂದೇ ಪುಪ್ಫುಸದ ಬಲದ ಮೇಲೆ ಸಂಗೀತವನ್ನು ಹಾಡುವದು ಅನಿವಾರ್ಯವಾಯಿತು. ಹೀಗಾಗಿ ಕುಮಾರ ಗಂಧರ್ವರು ತಮ್ಮ ಹಾಡುವ ಶೈಲಿಯನ್ನು ಈ ದುರ್ಬಲತೆಗೆ ಹೊಂದಿಸಿಕೊಳ್ಳಬೇಕಾಯಿತು. ಇಷ್ಟಾದರೂ ಸಹ ಬಾಲ್ಯದಲ್ಲಿಯೆ ಇವರು ತೋರಿದ ಸಂಗೀತಪ್ರತಿಭೆಯಿಂದಾಗಿ, ಆ ಸಮಯದಲ್ಲಿ ಸುಪ್ರಸಿದ್ಧರಾದ ಬಾಲ ಗಂಧರ್ವ ಹಾಗು ಸವಾಯಿ ಗಂಧರ್ವರ ಎಣಿಕೆಯಲ್ಲಿ ಇವರಿಗೆ ಕುಮಾರ ಗಂಧರ್ವ ಎಂದು ಪ್ರಶಂಸಿಸಿ ಕರೆಯಲಾಯಿತು.

ಯಾವುದೇ ಘರಾನಾಕ್ಕೆ ಕಟ್ಟು ಬೀಳದ ಕುಮಾರ ಗಂಧರ್ವರು ಶಾಸ್ತ್ರೀಯ ಸಂಗೀತವನ್ನಲ್ಲದೆ ಮರಾಠಿ ನಾಟ್ಯ ಸಂಗೀತವನ್ನು, ಭಜನಗಳನ್ನು ಹಾಗು ಮಧ್ಯಪ್ರದೇಶದ, ವಿಶೇಷವಾಗಿ ಮಾಳವಾ ಪ್ರದೇಶದ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಕುಮಾರ ಗಂಧರ್ವರ ಅಭಿಪ್ರಾಯದ ಪ್ರಕಾರ ಜಾನಪದ ಸಂಗೀತವೇ ಶಾಸ್ತ್ರೀಯ ಸಂಗೀತದ ತಾಯಿ. ಕುಮಾರ ಗಂಧರ್ವರು ಸ್ವತಃ ಕೆಲವು ರಾಗಗಳನ್ನು ಸೃಷ್ಟಿಸಿದ್ದಾರೆ. ಉದಾ: ಮಧುಸೂರ್ಜ, ಅಹಿಮೋಹಿನಿ, ಸಹೇಲಿ ತೋಡಿ, ಬೀಹಾದ ಭೈರವ,ಲಗನ ಗಾಂಧಾರ, ಸಂಜಾರಿ, ಮಾಳವತಿ. (ಆದರೆ ತಾವು ಕೇವಲ ರಾಗ ಸಂಶೋಧಕರು, ಸೃಷ್ಟಿಸಿದವರಲ್ಲ ಎಂದು ಅವರು ಹೇಳುತ್ತಿದ್ದರು.)

ಕುಮಾರ ಗಂಧರ್ವರ ಮಗಳು ಕಲಾಪಿನಿ ಕೋಂಕಾಳಿ ಹಾಗು ಮಗ ಮುಕುಲ ಶಿವಪುತ್ರ ಸಹ ಹಿಂದುಸ್ತಾನಿ ಸಂಗೀತಗಾರರು.ಸತ್ಯಶೀಲ ದೇಶಪಾಂಡೆ ಇವರ ಪ್ರಮುಖ ಶಿಷ್ಯರು.

೧೯೯೨ ಜನೆವರಿಯಲ್ಲಿ ಕುಮಾರ ಗಂಧರ್ವರು ನಿಧನರಾದರು.