ಸುಬ್ರಮಣ್ಯಮ್ ಚಂದ್ರಶೇಖರ್

From Wikipedia

ಸುಬ್ರಮಣ್ಯಮ್ ಚಂದ್ರಶೇಖರ್
Enlarge
ಸುಬ್ರಮಣ್ಯಮ್ ಚಂದ್ರಶೇಖರ್

ಸುಬ್ರಮಣ್ಯಮ್ ಚಂದ್ರಶೇಖರ್ (ಅಕ್ಟೋಬರ್ ೧೯, ೧೯೧೦ - ಆಗಸ್ಟ್ ೨೧, ೧೯೯೫) ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ.

ಪರಿವಿಡಿ

[ಬದಲಾಯಿಸಿ] ಪರಿಚಯ

ಇವರು ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ ೧೯,೧೯೧೦ ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಮ್ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ ಸಹಾಯಕ ಆಡಿಟರ್ ಜನರಲ್ ಆಗಿದ್ದರು. ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, ಟ್ರಿಪ್ಲಿಕೇನ್‌ನಲ್ಲಿ ಹಿಂದೂ ಹೈಸ್ಕೂಲ್ ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ. ಅದಕ್ಕೆ ಪುಟವಿಟ್ಟಂಥ ಆಸಕ್ತಿ,ಉತ್ಸಾಹ. ೧೯೨೫ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ೧೯೩೦ರಲ್ಲಿ ಪದವೀಧರರಾದರು. ವಿದ್ಯಾರ್ಥಿ ದೆಸೆಯಲ್ಲೇ ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ ಬರೆದಿದ್ದರು.

[ಬದಲಾಯಿಸಿ] ಸಂಶೋಧನೆ,ಉಪನ್ಯಾಸ

೧೯೩೦ರ ಮೇನಲ್ಲಿ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಮಂಜೂರಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದರು. ೧೯೩೧ರ ಮೇನಲ್ಲಿ ಲಂಡನ್‌ನ ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಸಭೆಗಳಲ್ಲಿ ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಓದಿದರು. ೧೯೩೧ರ ಜುಲೈನಲ್ಲಿ ಜರ್ಮನಿಗೆ ತೆರಳಿ, ವರ್ಗನಿಯಮ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದರು. ೧೯೩೨ರ ಜನವರಿಯಲ್ಲಿ 'ಮಾದರಿ ದ್ಯುತಿಗೋಳ'ಗಳ ಬಗ್ಗೆ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯಲ್ಲಿ ವಿಶಿಷ್ಟ ಪ್ರಬಂಧ ಮಂಡಿಸಿ, ಎಡಿಂಗ್‌ಟನ್ ಮತ್ತು ಮಿಲ್ಸ್‌ರ ಮೆಚ್ಚುಗೆಗೆ ಪಾತ್ರರಾದರು.ಬೆಲ್ಜಿಯಂನ ಲೀಡ್ ವಿಶ್ವವಿದ್ಯಾನಿಲಯದಲ್ಲಿ 'ಖಭೌತಶಾಸ್ತ್ರ'ದ ಬಗ್ಗೆ ನೀಡಿದ ಸರಣಿ ಉಪನ್ಯಾಸಗಳು ಮುಂದೆ ಪುಸ್ತಕರೂಪದಲ್ಲಿ ಪ್ರಕಟವಾದವು.

೧೯೩೪ರಲ್ಲಿ ಶ್ವೇತ ಕುಬ್ಜಗಳು (White Dwarf) ಹಾಗೂ ಮಿತಿಯುಳ್ಳ ರಾಶಿ ಕುರಿತು ರಷ್ಯಾದ 'ಪುಲ್ಕೋವೊ ಗ್ರಹವೀಕ್ಷಣಾಲಯ'ದಲ್ಲಿ ಉಪನ್ಯಾಸಗಳನ್ನು ನೀಡಿದರು.ಶ್ವೇತ ಕುಬ್ಜಗಳ ಬಗ್ಗೆ ಅವರು ನಡೆಸಿದ ಸಂಶೋಧನೆ ೧೯೪೪ರ ನಂತರ ಅವರಿಗೆ ಮನ್ನಣೆ ತಂದುಕೊಟ್ಟಿತು.

[ಬದಲಾಯಿಸಿ] ಪ್ರಾಧ್ಯಾಪಕ,ಸಂಶೋಧಕ

ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್‌ನಲ್ಲಿಯ 'ಯೆರ್ಕ್ಸ್ ಬಾಹ್ಯಾಕಾಶ ನಿರೀಕ್ಷಣಾಲಯ'ದಲ್ಲಿ ಸಂಶೋಧನಾ ಸಂಯೋಜಕರಾಗಿ ಕೆಲಸ ಮಾಡಲು ಆಹ್ವಾನ ಬಂದಿತು. ಯೆರ್ಕ್ಸ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ವಕ್ರೀಭವನ ದೂರದರ್ಶಕವಿತ್ತು. ಇಲ್ಲಿ ಚಂದ್ರಶೇಖರ್‌ರವರು ಸುಮಾರು ೨೭ ವರ್ಷಗಳ ಕಾಲ ಕೆಲಸ ಮಾಡಿದರು. ಉಪಾಧ್ಯಾಯ ವೃತ್ತಿಯೊಂದಿಗೆ ಸಂಶೋಧನೆಯೂ ಜೊತೆಜೊತೆಗೆ ನಡೆಯಿತು. ೧೯೩೮-೪೪ರವರೆಗೆ ನಕ್ಷತ್ರಗಳ ಚಲನಶಾಸ್ತ್ರ,ಚಲನಘರ್ಷಣೆಯ ಬಗ್ಗೆ ಸಂಶೋಧನ ನಡೆಸಿದರು. ೧೯೪೩ರಲ್ಲಿ ಪ್ರಾಧ್ಯಾಪಕರಾದರು. ೧೯೫೨-೭೧ರವರೆಗೆ 'ಆಸ್ಟ್ರೋ ಫಿಸಿಕಲ್ ಜರ್ನಲ್‌'ನ ವ್ಯವಸ್ಥಾಪಕ ಸಂಪಾದಕರಾಗಿದ್ದರು.

[ಬದಲಾಯಿಸಿ] ಪ್ರಶಸ್ತಿ,ಪುರಸ್ಕಾರಗಳು

೧೯೪೨-ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಡಿಎಸ್‌ಸಿ ಪದವಿ

೧೯೪೪-ಇಂಗ್ಲೆಂಡ್‌ನ ರಾಯಲ್ ಸೊಸೈಟಿಗೆ ಆಯ್ಕೆ.

೧೯೫೨-ಬ್ರೂಸ್ ಪದಕ

೧೯೫೩-ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ

೧೯೮೩-ಶ್ವೇತಕುಬ್ಜಗಳನ್ನು ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ

೧೯೫೦ರಲ್ಲಿ ಪ್ರಕಟವಾದ 'ರೇಡಿಯೋ ಆಕ್ಟಿವ್ ಟ್ರಾನ್ಸ್‌ಫರ್' ಪುಸ್ತಕಕ್ಕೆ, ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅತ್ಯುನ್ನತ ಪ್ರಶಸ್ತಿಯಾದ 'ಆಡಮ್ ಬಹುಮಾನ' ದೊರಕಿತು.

[ಬದಲಾಯಿಸಿ] ಶ್ವೇತಕುಬ್ಜ-ಹಾಗೆಂದರೇನು?

ನಕ್ಷತ್ರ್ಗಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ,ಅವುಗಳ ಸ್ಥಾನದಲ್ಲಿ ೧:೪ ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು,ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ.ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ,ಸಾಂದ್ರತೆ ಹೆಚ್ಚಿ,ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ.ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ,ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ.ಈ ಪ್ರಕ್ರಿಯೆ ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ.ನಕ್ಷತ್ರಗಳ ಭಾರ ಹೆಚ್ಚಿದರೂ,ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ.ಅಂಥ ನಕ್ಷತ್ರ ಸೂರ್ಯನ ೧.೪೪ ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು.ಅಲ್ಲದೆ ಯಾವುದೇ ನಕ್ಷತ್ರದ ದ್ರವ್ಯರಾಶಿ ಈ ಮಿತಿಗಿಂತ ಹೆಚ್ಚಾಗಿದ್ದರೆ,ಅದು ಸ್ಫೋಟಗೊಂಡು ಸ್ವಲ್ಪಾಂಶ ವಸ್ತುವನ್ನು ವಿಸರ್ಜಿಸಿ,ಶ್ವೇತಕುಬ್ಜವಾಗುತ್ತದೆ ಎಂದು ವಿವರಿಸಿದರು.ಅಂದರೆ ಯಾವುದೇ ಶ್ವೇತಕುಬ್ಜದ ದ್ರವ್ಯರಾಶಿ ೧.೪೪ ರ ಮಿತಿಗಿಂತ ಹೆಚ್ಚಾಗಿರುವುದಿಲ್ಲ.ಈ ಮಿತಿಯನ್ನು "ಚಂದ್ರಶೇಖರ್ ಮಿತಿ" ಎನ್ನುವರು.ಚಂದ್ರಶೇಖರ್ ಈ ಮಿತಿಯನ್ನು ಗಣಿತದ ಲೆಕ್ಕಾಚಾರಗಳಿಂದಲೇ ಕಂಡುಹಿಡಿದರು.ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸುವಂತೆ ಸಿಡಿದು,ಸೂಪರ್‌ನೋವಾ ಎಂಬ ಹೊಳಪಿನ ನಕ್ಷತ್ರವಾಗುತ್ತದೆ.

[ಬದಲಾಯಿಸಿ] ಇತರ ಆಸಕ್ತಿಗಳು

'ಪ್ರಿನ್ಸಿಪಲ್ಸ್ ಆಫ್ ಸ್ಟೆಲಾರ್ ಡೈನಾಮಿಕ್ಸ್' ಮುಂತಾದ ಗ್ರಂಥಗಳನ್ನು ಬರೆದು ಪ್ರಕಟಿಸಿದರು.೧೯೮೦ರಲ್ಲಿ ಸ್ವಇಚ್ಛೆಯಿಂದಲೇ ಕೆಲಸದಿಂದ ನಿವೃತ್ತಿ ಪಡೆದರು.ಇಳಿವಯಸ್ಸಿನಲ್ಲೂ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದರು.ಸಾಹಿತ್ಯದಲ್ಲೂ ಆಸಕ್ತಿ ಇತ್ತು.ಅಮೆರಿಕದಲ್ಲಿದ್ದರೂ ಅವರ ಉಡುಗೆ-ತೊಡುಗೆ ದಕ್ಷಿಣಭಾರತದ ಧೋತಿ,ಮೇಲಂಗಿ ಮಾತ್ರ.ಕೇಳುತ್ತಿದ್ದುದು ಕರ್ನಾಟಕ ಸಂಗೀತ.ಸುಬ್ರಮಣ್ಯಮ್ ಚಂದ್ರಶೇಖರ್ ೧೯೯೫ರಲ್ಲಿ ನಿಧನರಾದರು.