ಚಂದ್ರಶೇಖರ ಪಾಟೀಲ
From Wikipedia
ಚಂದ್ರಶೇಖರ ಪಾಟೀಲರ ಕಾವ್ಯನಾಮ "ಚಂಪಾ". 'ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ; ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುವ ಕವಿ ಚಂದ್ರಶೇಖರ ಪಾಟೀಲರು.(೧೯೩೯). ಸುತ್ತಲಿನ ಜಗತ್ತಿನ ಓರೆಕೋರೆಗಳನ್ನು ತೀಕ್ಷ್ಣವಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವ ಚಂಪಾ , ಠಕ್ಕು ಡಂಭಾಚಾರ ಭಟ್ಟಂಗಿತನ ಸಾಮಾಜಿಕ ಶೋಷಣೆ -ಮುಂತಾದವುಗಳ ವಿರುದ್ಧ ಸಾಹಿತ್ಯ ಮಾಧ್ಯಮದ ಮೂಲಕ ಹೋರಾಟ ನಡೆಸುತ್ತಿರುವ ಚಂಪಾ ೧೯೬೦ ರಲ್ಲಿ ತಮ್ಮ ಮೊದಲ ಕವನ ಸಂಕಲನ "ಬಾನುಲಿ"ಯನ್ನು ಪ್ರಕಟಿಸಿದರು. 'ನಾನು ಬರೆಯತೊಡಗಿದ್ದು ಬಹುಶ: ರೊಮ್ಯಾಂಟಿಕ್ ಮನೋಧರ್ಮದಿಂದಲೇ. ಈ ಮನೋಧರ್ಮವನ್ನು ಇನ್ನೂ ಕಾಪಾಡಿಕೊಂಡು ಬಂದಿದ್ದೇನೆ ಎನಿಸುತ್ತದೆ' ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಅವರ ಮೊದಲ ಸಂಕಲನದಲ್ಲೇ ವ್ಯಂಗ್ಯಾತ್ಮಕ ಮನೋಭಾವವನ್ನು 'ಜೇಲಿನಲ್ಲಿ ದೇವರು' ಮುಂತಾದ ಕವಿತೆಗಳಲ್ಲಿ ಕಾಣಬಹುದು.
ಚಂದ್ರಶೇಖರ ಪಾಟೀಲರ 'ಗಾಂಧಿ ಸ್ಮರಣೆ' ಎಂಬ ಕವಿತಾ ಸಂಕಲನಕ್ಕೊಂದು ಐತಿಹಾಸಿಕ ಮಹತ್ವವಿದೆ.೧೯೭೬ ರಲ್ಲಿ ಪ್ರಕಟವಾದ ಈ ಕವಿತೆ, ತುರ್ತುಪರಿಸ್ಥಿತಿಯ ಕರಾಳದಿನಗಳನ್ನು ಕುರಿತ ಪ್ರತಿಕ್ರಿಯೆಯಾಗಿದೆ. 'ಅತಿಥಿ' ಎಂಬುದು ಗಾಂಧಿ ಸ್ಮರಣೆ ಸಂಕಲನದ ಒಂದು ಮುಖ್ಯ ಕವಿತೆ. ತುರ್ತುಪರಿಸ್ಥಿತಿಯ ವಿರುದ್ದ ಬಂಡೆದ್ದ ಪಾಟೀಲರು ಕೆಲವು ದಿನಗಳ ಮಟ್ಟಿಗೆ ಸರ್ಕಾರಿ 'ಅತಿಥಿ'ಯಾಗಿ ಸೆರೆಮನೆಯಲ್ಲಿದ್ದರು. ಆ ಅನುಭವವನ್ನು ಕುರಿತು 'ಇಪ್ಪತಾರು ದಿನ ಇಪ್ಪತ್ತೈದು ರಾತ್ರಿ' ಎಂಬ ಕಿರುಹೊತ್ತಿಗೆಯನ್ನೂ ಅವರು ಪ್ರಕಟಿಸಿದ್ದಾರೆ.
ಲಂಕೇಶ್ ಪತ್ರಿಕೆ ಯ ಆರಂಭದ ದಿನಗಳಲ್ಲಿ ಚಂದ್ರಶೇಖರ ಪಾಟೀಲರು ಆ ಪತ್ರಿಕೆಗೆ ಲೇಖನ, ಕವನಗಳನ್ನು ಬರೆಯುತ್ತಿದ್ದರು. "ಪ್ರೀತಿ ಇಲ್ಲದೆ ನಾನು ಏನನ್ನೂ ಮಾಡಲಾರೆ,ಜಗಳವನ್ನೂ ಕೂಡ" ಇದು ಜನಪ್ರಿಯವಾಗಿರುವ ಚಂಪಾ ಉವಾಚ.
[ಬದಲಾಯಿಸಿ] ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ
ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷರು.
[ಬದಲಾಯಿಸಿ] ಚಂಪಾರ ಒಂದು ಕವಿತೆ
[ಬದಲಾಯಿಸಿ] ಅತಿಥಿ'
- ಹಿಂದಿಬ್ಬರು ಮುಂದಿಬ್ಬರು ರಾಜಭಟ್ಟರ ನಡುವೆ
ನಡೆದಾಗ ದೊಡ್ಡಗೇಟು ಕಿರುಗುಡುತ್ತದೆ ಒಂದು ಮೂಲೆಗೆ ಗಾಂಧಿ-ಇನ್ನೊಂದು ಮೂಲೆಗೆ ನೆಹೆರು ಗೋಡೆಯ ತುಂಬಾ ಮತ್ತೊಬ್ಬ ಗಾಂಧಿಯ ಅಮರ ಸಂದೇಶ
- ಭೂಗರ್ಭದ ಕಾಲಕೋಶಕ್ಕಾಗಿ ಹೆಸರು-ದೆಸೆ-ಕಿರಿಗೋತ್ರ
ದಾಖಲಾಗುತ್ತದೆ-ಎರಡು ಪೋಜಿನ ಫೋಟೋ ಸಮೇತ ಮತ್ತೇ ರಾಜಭಟರ ನಡುವೆ ಅತಿಥಿಗೃಹಕ್ಕೆ ಪ್ರವೇಶ ಸಣ್ಣಸರಳಿನ ಬಾಗಿಲು ಸರಳವಾಗಿ ತೆರೆದು ಸರಳವಾಗಿ ಮುಚ್ಚುತ್ತದೆ
- ಮಲಗಲು ಹಾಸಿಗೆ , ಹೊದೆಯಲು ಕಂಬಳಿ, ಹೇಲಲು ಪಾಯಖಾನೆ
ಎಲ್ಲಾ ಒಂದೇ ಕಡೆ ಸರ್ವತಂತ್ರ ಸ್ವತಂತ್ರ ಪ್ರದೇಶ ಓದಲು ಪಂಚತಂತ್ರ, ಧರ್ಮಶ್ರೀ,ಪುರುಶೋತ್ತಮನ ಸಾಹಸಗಳು ಬರೆಯಬೇಕಿನಿಸಿದರೆ ಬುಗುರಿದೆ ,ಖಾಲಿ ಗೋಡೆ ಇದೆ
- ಹೊತ್ತು ಹೊತ್ತಿಗೆ ಡಾಕ್ಟ್ಟರರ ನಾಲಿಗೆಯ ಶಬರಿ ಸ್ಪರ್ಶದ ಊಟ
ಕಟ್ ಕಟ್ ಬೂಟಿನ ಯೋಗಕ್ಷೇಮ,ಆಕಾಶದಲ್ಲಾಗೀಗ ವರ್ಣಮಯ ಕ್ರಾಂತಿಯ ಸುದ್ದಿ,ಗಿಳಿವಿಂಡು,ದಾಸರ ಹಾಡು ಕುಂಡಿಯಹಿಂದೆ ಕೈಕಟ್ಟಿಕೊಂಡು ತಿರಗುಣಿಯ ಓಡಾಟ
- ಸಂಜೆ ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ
ಮುಗಿಲಲ್ಲಿ ಎಲ್ಲೋ ಹಕ್ಕಿಯ ಲಗಾಟ ಹೊಡೆದಾಗ ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ ಮೈತುಂಬಾ ತುಂಗಭದ್ರೆಯ ಸೆಳವು ಹೆಚ್ಚುತ್ತದೆ -->'ಗಾಂಧಿ ಸ್ಮರಣೆ'ಸಂಕಲನದಿಂದ