ರಾಜಾ ರವಿ ವರ್ಮ
From Wikipedia
ರಾಜಾ ರವಿವರ್ಮ (೧೮೪೮ - ೧೯೦೬) - ಭಾರತದ ಸುಪ್ರಸಿದ್ಧ ಚಿತ್ರಕಾರ. ಮಹಾಭಾರತ ಮತ್ತು ರಾಮಾಯಣದ ವಿವಿಧ ಪ್ರಸಂಗಗಳ ತಮ್ಮ ಚಿತ್ರಗಳಿಗೆ ರವಿ ವರ್ಮ ಪ್ರಸಿದ್ಧರು.
ಕೇರಳದ ತಿರುವನಂತಪುರದಿಂದ ೨೫ ಮೈಲು ದೂರದಲ್ಲಿರುವ ಕಿಲಿಮನೂರು ಅರಮನೆಯಲ್ಲಿ ರವಿ ವರ್ಮ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಪ್ರತಿಭೆ ತೋರಿದ ರವಿ ವರ್ಮ, ೧೪ ವರ್ಷದವರಿದ್ದಾಗ ತಿರುವಾಂಕೂರಿನ ಮಹಾರಾಜರ ಪ್ರೋತ್ಸಾಹ ಪಡೆದರು. ಅವರ ಆಸ್ಥಾನ ಚಿತ್ರಕಾರರಾಗಿದ್ದ ರಾಮಸ್ವಾಮಿ ನಾಯ್ಡು ಅವರಿಂದ ಚಿತ್ರಕಲೆಯ ಪಾಠಗಳನ್ನು ಪಡೆದರು. ನಂತರ ಬ್ರಿಟಿಷ್ ಚಿತ್ರಕಾರ ಥಿಯೋಡೋರ್ ಜೆನ್ಸನ್ ಅವರಿಂದಲೂ ಪಾಠಗಳನ್ನು ಪಡೆದರು. ಯೂರೋಪಿನ ಚಿತ್ರಕಲೆಯಲ್ಲಿ ಭಾವದ ಶಕ್ತಿಶಾಲಿ ವ್ಯಕ್ತತೆ ರವಿ ವರ್ಮರನ್ನು ಆಕರ್ಷಿಸಿತು.
೧೮೭೩ ರಲ್ಲಿ ವಿಯೆನ್ನಾ ನಗರದಲ್ಲಿ ತಮ್ಮ ಚಿತ್ರಗಳ ಪ್ರದರ್ಶನಕ್ಕೆ ಪ್ರಶಸ್ತಿಯನ್ನು ಗಳಿಸಿದ ಮೇಲೆ ರವಿ ವರ್ಮ ಪ್ರಸಿದ್ಧರಾದರು. ಚಿತ್ರಗಳಿಗೆ ವಸ್ತುವನ್ನು ಹುಡುಕುತ್ತಾ ಭಾರತದಾದ್ಯಂತ ಸಂಚರಿಸಿದರು. ಮೈಸೂರು ಅರಸರ ಪ್ರೋತ್ಸಾಹದಿಂದ ಮೈಸೂರಿನಲ್ಲಿ ಕೆಲ ವರ್ಷಗಳು ಇದ್ದರು. ಹಾಗೆಯೇ ಮುಂಬೈ ನಗರದಲ್ಲಿಯೂ ಕೆಲ ವರ್ಷ ಕೆಲಸ ಮಾಡಿದರು.
ರವಿ ವರ್ಮರ ಬಹುಪಾಲು ಚಿತ್ರಗಳು ಪೌರಾಣಿಕ ವಸ್ತುವನ್ನು ಹೊಂದಿವೆ; ಉದಾಹರಣೆಗೆ ನಳ ಮತ್ತು ದಮಯಂತಿ, ದುಷ್ಯಂತ ಮತ್ತು ಶಕುಂತಲೆ, ಇತ್ಯಾದಿ. ಹಿಂದೂ ದೇವತೆಗಳ ಚಿತ್ರಗಳಿಗೆ ಮಾದರಿಯಾಗಿ ಅವರು ದಕ್ಷಿಣ ಭಾರತೀಯ ಮಹಿಳೆಯರ ರೂಪವನ್ನು ಉಪಯೋಗಿಸುತ್ತಿದ್ದರು. ಮುಂಬೈ ನಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಮಹಾರಾಷ್ಟ್ರೀಯ ಮಹಿಳೆಯರ ಚಿತ್ರಗಳನ್ನೂ ಬರೆದಿದ್ದಾರೆ. ರವಿ ವರ್ಮರ ಚಿತ್ರಕಲೆ ಕೆಲವೊಮ್ಮೆ "ಅತಿಯಾಗಿ ಭಾವುಕ" ಎಂಬ ಟೀಕೆಗೆ ಒಳಗಾಗಿದ್ದರೂ ಒಟ್ಟಾರೆ ಬಹಳ ಜನಪ್ರಿಯ ಚಿತ್ರಕಾರರಾಗಿದ್ದಾರೆ.
ರಾಜಾ ರವಿ ವರ್ಮ ೫೮ ನೆಯ ವಯಸ್ಸಿನಲ್ಲಿ ೧೯೦೬ ರಲ್ಲಿ ನಿಧನರಾದರು.