ದಸರ

From Wikipedia

ದಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮೀಯರಿಗೆ ಇದೊಂದು ಪ್ರಮುಖ ಹಬ್ಭ.

ಪರಿವಿಡಿ

[ಬದಲಾಯಿಸಿ] ಮೈಸೂರು ದಸರಾ

ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ
Enlarge
ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ

ಈ ಹತ್ತು ದಿನಗಳನ್ನು ಮೈಸೂರಿನಲ್ಲಿ ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರ ಎಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ ಚಾಮುಂಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.

[ಬದಲಾಯಿಸಿ] ಭಾರತದ ಇತರೆಡೆಗಳಲ್ಲಿ ದಸರಾ

ಇದೇ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ 'ದಶೇರ'ವಾಗಿಯೂ, 'ದುರ್ಗಾ ಪೂಜೆ'ಯಾಗಿಯೂ ಆಚರಿಸುತ್ತಾರೆ. ೯ ದಿನಗಳ ಈ ಹಬ್ಬಕ್ಕೆ 'ನವರಾತ್ರಿ' ಎಂಬ ಹೆಸರೂ ಇರುವುದು. ಆಯುಧ ಪೂಜೆ, ವಿಜಯ ದಶಮಿ ಗಳನ್ನೊಳಗೊಂಡ ಹಲವು ದಿನಗಳ ಹಬ್ಬದಾಚರಣೆ ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ದಸರಾ ಸಮಯದಲ್ಲಿ ದೀಪಾಲಂಕಾರ ಹೊಂದಿರುವ ಮೈಸೂರು ಅರಮನೆ
Enlarge
ದಸರಾ ಸಮಯದಲ್ಲಿ ದೀಪಾಲಂಕಾರ ಹೊಂದಿರುವ ಮೈಸೂರು ಅರಮನೆ

ಬಂಗಾಳದಲ್ಲಿ ಈ ಸಮಯದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ ಕೊಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು. ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾ ಗೌರಿ ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ತಗೊಳಿಸಿಕೊಳ್ಳಬಹುದು.

[ಬದಲಾಯಿಸಿ] ಆಚರಣಾ ವಿಧಿ ವಿಧಾನಗಳು

ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ. ಈ ಸಮಯದಲ್ಲಿ ವಿವಾಹ, ಉಪನಯನ ಇತ್ಯಾದಿ ಶುಭಕರ್ಮಗಳಿಗೆ ತಿಥಿ, ವಾರ, ನಕ್ಷತ್ರ ಮುಂತಾದವುಗಳನ್ನು ಗಮನಿಸುವ ಅಗತ್ಯವಿಲ್ಲವೆಂದು ಭಾವಿಸಲಾಗುತ್ತದೆ. ಏಕೆಂದರೆ ಈ ಹತ್ತು ದಿನಗಳಲ್ಲಿ ಯಾವ ಕೆಲಸವನ್ನೂ ಮಾಡಿದರೂ ಯಶಸ್ಸು ದೊರಕುವುದೆಂಬ ನಂಬಿಕೆ ಇದೆ.ಇದಲ್ಲದೇ ವರ್ಷದಲ್ಲಿ ಆಚರಿಸಲಾಗದ ಯಾವುದೇ ವ್ರತ, ಹಬ್ಬಗಳನ್ನೂ ಈ ಸಮಯದಲ್ಲಿ ಆಚರಿಸುವರು.

ಈ ದಿನಗಳಲ್ಲಿ ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳು ಲಕ್ಷ್ಮಿಯೆಂದೂ, ನಂತರದ ಮೂರುದಿನಗಳಲ್ಲಿ ಸರಸ್ವತಿ ಎಂದೂ ಮತ್ತು ಕಡೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸುವರು.

ಪ್ರಥಮಾ ತಿಥಿಯಂದು ಪ್ರಾತಃಕಾಲದಲ್ಲಿ ಅಭ್ಯಂಜನ ಸ್ನಾನ ಮಾಡಿ ಕಲಶ ಸ್ಥಾಪನೆ ಮಾಡಿ, ಷೋಡಶಾಂಗ ಪೂಜೆಯನ್ನು ದೇವಿಗೆ ಅರ್ಪಿಸುವರು. ಬಲಿ ಕೊಡುವುದರ ಸಂಕೇತವಾಗಿ ಉದ್ದಿನ ಅನ್ನ ಅಥವಾ ಬೂದುಗುಂಬಳಕಾಯಿಯನ್ನು ಮೊದಲನೆಯ ದಿನ ಅಥವಾ ಕೊನೆಯ ದಿನದಂದು ಅರ್ಪಿಸುವರು. ಈ ಸಮಯದಲ್ಲಿ ಚಂಡೀ ಸಪ್ತಶತಿ, ನಾರಾಯಣಹೃದಯ ಪಾಠ, ಲಕ್ಷ್ಮೀ ಹೃದಯ ಪಾಠ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆಯನ್ನೂ ಮಾಡುವ ಪದ್ಧತಿ ಇದೆ. ಎರಡು ವರ್ಷದಿಂದ ಹತ್ತು ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಕೌಮಾರಿಯೆಂದು ಪೂಜಿಸುವ ಸಂಪ್ರದಾಯವೂ ಇದೆ. ಕುಮಾರಿ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಳಿ, ಚಂಡಿಕಾ, ಶಾಂಭವಿ, ದುರ್ಗಾ ಮತ್ತು ಭದ್ರಾ ಎಂದ ಹೆಸರುಗಳಿಂದ ಆವಾಹಿಸಿ ಭವಾನೀ ಸಹಸ್ರನಾಮವನ್ನು ಪಾರಾಯಣ ಮಾಡುವರು. ಪಂಚಮೀ ತಿಥಿಯಂದು ಉಪಾಂಗ ಲಲಿತಾ ದೇವಿಯನ್ನು ಪೂಜಿಸಿದರೆ, ಮೂಲಾ ನಕ್ಷತ್ರದಂದು ಸರಸ್ವತೀ ದೇವಿಯನ್ನು ಪೂಜಿಸಿ, ಅಷ್ಟಮಿಯಂದು ದುರ್ಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಮಹಾನವಮಿಯಂದು ಶತಚಂಡೀ ಹೋಮವನ್ನೂ ಮಾಡುವರು. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರನೆಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ ಚಾಮುಂಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.

[ಬದಲಾಯಿಸಿ] ಪುರಾಣಗಳಲ್ಲಿ ದಸರಾ

ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ಮೈಸೂರಿನ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ದಕ್ಷಿಣ ಕರ್ನಾಟಕ (ಹಳೆಯ ಮೈಸೂರು ಪ್ರಾಂತ್ಯ) ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ಪಟ್ಟದ ಗೊಂಬೆಗಳನ್ನು (ತೇಗ ಅಥವಾ ಚಂದನದ ಮರದಿಂದ ಮಾಡಿದ) ನೀಡುವರು.

ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಇಲ್ಲಿ ವಿಶೇಷವೇನೆಂದರೆ, ಈ ಎಲ್ಲ ತಿಂಡಿಗಳು ಸಣ್ಣ ಸಣ್ಣ ಸ್ವರೂಪದಲ್ಲಿರುವುವು. ವಿಜಯದಶಮಿ ಯಂದು ಪಟ್ಟದ ಗೊಂಬೆಗಳನ್ನು ಮಲಗಿಸಿ ಇಟ್ಟು ಮಾರನೆಯ ದಿನ ಬೆಳಗ್ಗೆ ಕಲಶವನ್ನು ವಿಸರ್ಜಿಸುವರು. ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ - ವಿಜಯದಶಮಿಯಂದು ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿ.

[ಬದಲಾಯಿಸಿ] ಮಹಾರಾಜರ ಖಾಸಗಿ ದರ್ಬಾರ್

ಮೈಸೂರು ದಸರ ಮಹೋತ್ಸವಕ್ಕೆ ೨೦೧ ವರ್ಷಗಳ ಇತಿಹಾಸವಿದೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ ಮಹಾರಾಜರ ಖಾಸಗಿ ದರ್ಬಾರ್.

ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಭತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ. ದಸರಾ ಪ್ರಾರಂಭವಾಗುವ ಮೊದಲು ನಾಲ್ಕು ಟನ್ ತೂಗುವ ಮೈಸೂರಿನ ಅತ್ಯಂತ ಪ್ರಾಚೀನ ರತ್ನ ಸಿಂಹಾಸನವನ್ನು ತಂದು ಅಣಿಗೊಳಿಸಲಾಗುತ್ತದೆ. ಮೈಸೂರು ಸಮೀಪದ ಗೆಜ್ಜೆಹಳ್ಳಿಯ ಆಯ್ದ ಜನರು ಈ ಕೆಲಸವನ್ನು ನಿರ್ವಹಿಸುವ ವಾಡಿಕೆ ಇದೆ. ಒಡೆಯರ್ ಮನೆತನದ ರಾಜ ಪೂಜಾವಿಧಾನಗಳನ್ನು ನೆರವೇರಿಸಿ,ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವ ಸಂಪ್ರದಾಯವಿದೆ.

ಹಿಂದೆ ರಾಜಾಡಳಿತವಿದ್ದ ಕಾಲದಲ್ಲಿ ಯಾವ ರೀತಿ ಮಹಾರಾಜರ ದರ್ಬಾರ್ ನಡೆಯುತ್ತಿತ್ತೂ ಅದೇ ರೀತಿ, ಕಂಕಣಧಾರಿಯಾದ ಒಡೆಯರ್ ರತ್ನ ಖಚಿತ ಸಿಂಹಾಸನಾರೂಢರಾಗಿ, ಪರಂಪರಾಗತ ವಿಧಿವಿಧಾನಗಳಂತೆ ದರ್ಬಾರ್ ನಡೆಸುತ್ತಾರೆ. ಈ ದರ್ಬಾರ್ ನಡೆಯುವ ಹಾಲ್‍ನಲ್ಲಿ ರಾಜ ಪರಿವಾರದವರು, ರಾಜ ಪುರೋಹಿತರು, ವಂದಿ ಮಾಗಧರು, ಅತಿಥಿ ಗಣ್ಯರು, ದೇವಾಲಯಗಳ ಅರ್ಚಕರು, ಅರಮನೆ ಸೇವಕರು ಮುಂತಾಗಿ ಎಲ್ಲರೂ ಹಾಜರಿರುತ್ತಾರೆ. ಈ ಖಾಸಗಿ ದರ್ಬಾರ್ ನೋಡಿದರೆ, ಹಿಂದಿನ ಕಾಲದಲ್ಲಿ ಇದ್ದ ಅರಮನೆಗಳಲ್ಲಿ ನಡೆಯುತಿದ್ದ ಆಚರಣೆಗಳ ಕಲ್ಪನೆ ಬರುತ್ತದೆ.

ಪ್ರತಿವರ್ಷವೂ ತಪ್ಪದೆ ನಡೆಯುವ ಈ ಖಾಸಗಿ ದರ್ಬಾರ್ ದಸರ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆಯಾಗಿದೆ.

ಇತರ ಭಾಷೆಗಳು