ಕರ್ನಾಟಕ ಜಾನಪದ

From Wikipedia

ಕರ್ನಾಟಕ ಜಾನಪದ

ಈ ಲೇಖನ ಕನ್ನಡ ವಿಕಿಪೀಡಿಯಾದ ೧೦೦೦ದ ಲೇಖನ. ಈ ಲೇಖನವನ್ನು ಮುಂದುವರೆಸಿ ವಿಶ್ವಕೋಶಕ್ಕೆ ತಕ್ಕ ಲೇಖನ ಮಾಡಲು ಸಹಾಯ ಮಾಡಿ.

ಪರಿವಿಡಿ

[ಬದಲಾಯಿಸಿ] ಕರ್ನಾಟಕದ ಜಾನಪದ

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ

ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ

ಎದ್ದೊಂದು ಗಳಿಗೆ ನೆನೆದೇನು


ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ

ಎಣ್ಣೇಲಿ ಕಣ್ಣಾಬಿಡುವೋಳೆ, ಜಗಜ್ಯೋತಿ

ಸತ್ಯಾದಿಂದುರಿಯೆ ನಮಗಾಗಿ


ತೊಟ್ಟಿಲು ಹೋತ್ಕೊಂಡು ತವರ್ಬಣ್ಣ ಉಟ್ಕೊಂಡು

ಅಪ್ಪ ಕೊಟ್ಟೆಮ್ಮೆ ಹೋಡ್ಕೊಂಡು | ತೌರೂರ

ತಿಟ್ಟಹತ್ತಿ ತಿರುಗಿ ನೋಡ್ಯಾಳೊ


ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ, ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು.


ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ, ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು.


ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ, ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ, ತನ್ನ ಭಕ್ತಿಗೊಂದು ರೂಪವನ್ನೂ - ಕಲೆ, ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ 'ಜಾನಪದ' ಎನ್ನಿಸಿಕೊಂಡಿದೆ.


ಕರ್ನಾಟಕದಲ್ಲಿ ಸಾವಿರಾರು ವರ್ಷಗಳಿಂದ ಹರಿದುಬಂದ ಜಾನಪದ ಜ್ಞಾನವಿದೆ, ಇದನ್ನು ಹಲವಾರು ಪ್ರಭೇದಗಳಲ್ಲಿ ವಿಂಗಡಿಸಬಹುದು.


[ಬದಲಾಯಿಸಿ] ಕನ್ನಡ ಜನಪದ ಗೀತೆಗಳು ಮತ್ತು ಲಾವಣಿಗಳು

ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ. ಕುಟ್ಟುವುದು, ಬೀಸುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯುವುದು, ಹಚ್ಚೆ ಹೊಯ್ಯುವುದು, ಮಗು ಮಲಗಿಸುವುದು, ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ. ಬೇಸಾಯ, ನೇಯ್ಗೆ ಮೊದಲಾದ ವೃತ್ತಿಗಳ, ಕುಣಿತಗಳ ಒಂದು ಅವಿಭಾಜ್ಯ ಅಂಗವಾಗಿ ಹಾಡು ಬರುತ್ತದೆ. ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಹೊಲ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಸಾಮೂಹಿಕವಾಗಿಯೊ, ವೈಯುಕ್ತಿಕವಾಗಿಯೊ ಗೀತಾಪ್ರವಾಹ ಹರಿಯಲೇ ಬೇಕು. ಹಬ್ಬ ಹರಿದಿನ ಮದುವೆಯೊಸಗೆ ಯಾವುದೇ ಶುಭಕಾರ್ಯವಾಗಲೀ ಶಾಸ್ತ್ರವೇ ಆಗಲೀ, ದೇವರಕಾರ್ಯವೇ ಆಗಲೀ ಹಾಡಿನಿಂದ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯ ವಾಗಬೇಕು. ಬಹುತೇಕವಾಗಿ ಜನಪದಗೀತೆಗಳೆಲ್ಲ ಕ್ರಿಯಾತ್ಮಕವಾದುವು; ಯಾವುದಾದರೊಂದು ಕ್ರಿಯೆಯ ಪ್ರೇರಣೆಯಿಂದ ಉಗಮಗೊಳ್ಳುತ್ತವೆ. ಕ್ರಿಯೆಯನ್ನು ಸೃಜನಾತ್ಮಕವನ್ನಾಗಿ ಮಾಡುತ್ತವೆ. ಹಳ್ಳಿಗರ ಆಸರು ಬೇಸರುಗಳಿಗೆ ಇವು ಹಿರಿಮದ್ದುಗಳಾಗಿವೆ.

[ಬದಲಾಯಿಸಿ] ಆದಿವಾಸಿ ಜಾನಪದ

[ಬದಲಾಯಿಸಿ] ಜನಪದ ಕುಣಿತ ಮತ್ತು ಬಯಲಾಟಗಳು

  • ಡೊಳ್ಳು ಕುಣಿತ
  • ಯಕ್ಷಗಾನ
  • ದೊಡ್ಡಾಟ
  • ಶ್ರೀ ಕೃಷ್ಣ ಪಾರಿಜಾತ
  • ಸಣ್ಣಾಟ
  • ಸೋಮನ ಕುಣಿತ
  • ಜಗ್ಗಲಿಗೆ ಮೇಳ
  • ಕುದುರೆ ಕುಣಿತ
  • ಬೀಸು ಕಂಸಾಳೆ ಕುಣಿತ

[ಬದಲಾಯಿಸಿ] ಜನಪದರ ವಾದ್ಯಗಳು

[ಬದಲಾಯಿಸಿ] ಜಾನಪದ ಕಥನ ಕಾವ್ಯಗಳು

[ಬದಲಾಯಿಸಿ] ಕೆರೆಗೆ ಹಾರ

ಕೆರೆಗೆ ಹಾರ ಒಂದು ಜನಪದ ಕಾವ್ಯ. ಇದನ್ನು ನಾವು ಒಂದು ಪ್ರೇಮಕಥೆ ಎಂದು ಭಾವಿಸಬಹುದು. ಈ ಹಾಡಿನಲ್ಲಿ ಭಾಗೀರಥಿ ಎಂಬ ಮಹಿಳೆಯನ್ನು ಬಲಿಯಾಗಿ ಕೊಡಲಾಗುತ್ತದೆ. ಆಗ ಅವಳ ಮನಸ್ಸಿನ ತಳಮಳವನ್ನು ಹಾಡಿನಲ್ಲಿ ಸೂಕ್ಷ್ಮವಾಗಿ ಬಿಂಬಿಸಲಾಗಿದೆ.

[ಬದಲಾಯಿಸಿ] ಜನಪದ ಕರಕುಶಲ ಕಲೆಗಳು

  • ತೊಗಲು ಬೊಂಬೆ ತಯಾರಿಸುವುದು
  • ಹಬ್ಬಗಳಲ್ಲಿ ಬಣ್ಣಗಾರಿಕೆ ಮತ್ತು ಚಿತ್ರಗಾರಿಕೆ
  • ಜನಪದ ಶೈಲಿಯ ನೇಯ್ಗೆ
  • ಲಂಬಾಣಿಗರ ಕರಕುಶಲ ಕಲೆ
  • ಜನಪದರ ಕಾಷ್ಠ ಉತ್ಪನ್ನಗಳು

[ಬದಲಾಯಿಸಿ] ಜಾನಪದ ತಂತ್ರಜ್ಞಾನ

ಜನಪದ ತಂತ್ರಜ್ಞಾನದ ಚರಿತ್ರೆಯ ಮೂಲ ಜಗತ್ತಿನ ವಿವಿಧ ಸಂಸೃತಿಗಳಲ್ಲಿ ಹುದುಗಿದೆ. ಗೆಲೆಲಿಯೋ ಪೂರ್ವ ತಂತ್ರಜ್ಞಾನಕ್ಕೆ ಆದಿಮ ಸಮುದಾಯಗಳು ನೀಡಿರುವ ಕೊಡುಗೆ ಅನನ್ಯವಾದುದು. ಬೀಸುವ ಕಲ್ಲು ಮತ್ತು ಗಾಡಿ ಚಕ್ರದ ಅವಿಷ್ಕಾರಗಳು ಆ ಹೊತ್ತಿಗೆ ದೊಡ್ಡ ತಂತ್ರಜ್ಞಾನ ಶೋಧಗಳಾಗಿದ್ದವು. ಹೀಗಾಗಿ ಜನಪದ ತಂತ್ರಜ್ಞಾನವು ಬಹಳ ಹಿಂದಿನಿಂದಲೂ ಕ್ರಿಯಾತ್ಮಕ ರೂಪದಲ್ಲಿ ತಲೆಮಾರುಗಳಿಂದ ಹರಿದುಬಂದಿರುವುದಲ್ಲದೆ, ಕಾಲಕ್ಕೆ ತಕ್ಕಂತೆ ಹೊಸ ಅಗತ್ಯಗಳನ್ನು ಮನನ ಮಾಡಿಕೊಂಡು, ಬದಲಾವಣೆ ಮತ್ತು ಬೆಳವಣಿಗೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ.

ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಬರುವ ಹಲವಾರು ವಸ್ತುಗಳು ಅವಿಷ್ಕಾರಗಳೇ, ನಮ್ಮ ಜನಪದರ ಜಾನಪದ ತಂತ್ರಜ್ಞಾನವನ್ನು ಮುಖ್ಯವಾಗಿ, ಬೇಸಾಯದ ಉಪಕರಣಗಳು, ಮನೆ ನಿರ್ಮಾಣದ ತಂತ್ರಗಳು, ಮನೆಬಳಕೆಯ ವಸ್ತುಗಳು, ಖನಿಜದ ತಿಳುವಳಿಕೆ, ಜನಪದರ ತೂಕ ಮತ್ತು ಅಳತೆಯ ವಿಧಾನಗಳು, ಜಾನಪದರ ನವರತ್ನಗಳು, ಹಳ್ಳಿಗರ ಲೆಕ್ಕಾಚಾರ ಮತ್ತು ಗಣಿತ, ಚಿತ್ರ ರಚನೆ ಮತ್ತು ಬಣ್ಣಗಾರಿಕೆ, ಬೇಟೆಯಲ್ಲಿ ಜನಪದ ತಂತ್ರಗಳು ಎಂದು ಗುರುತಿಸಬಹುದು.

[ಬದಲಾಯಿಸಿ] ಜನಪದ ವೈದ್ಯ

[ಬದಲಾಯಿಸಿ] ಜನಪದ ಕ್ರೀಡೆಗಳು

ಜನಪದ ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆಗಾಗಿ, ದೈಹಿಕ ವ್ಯಾಯಾಮಕ್ಕಾಗಿ ರಚಿಸಲ್ಪಟ್ಟ ಆಟಗಳು. ಇವುಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಇವು ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿರುವುದು.

[ಬದಲಾಯಿಸಿ] ಲಗೋರಿ

ಲಗೋರಿ !!! ಅಂತ ಕಿರುಚಿದಾಗ ಮೈ ಎಲ್ಲ ಜುಮ್ ಅನ್ನುವುದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು.

  • ಇದು ಎಂತಹ ಆಟವಯ್ಯ ?

ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ.

ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿ ಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು.

[ಬದಲಾಯಿಸಿ] ಕುಂಟು ಬಿಲ್ಲೆ

ಇದು ಚಿಕ್ಕ ಹೆಣ್ಣು ಮಕ್ಕಳು ಆಡುವ ಆಟ

[ಬದಲಾಯಿಸಿ] ಮರಕೋತಿಯಾಟ

ಇದು ಸಹ ಮುಟ್ಟಾಟದಂತೆ ಇದ್ದು ದೊಡ್ಡ ಮರ ಗಿಡಗಳ ಮೇಲೆ ಆಡುವದರಿಂದ ಇದಕ್ಕೆ ಮರಕೋತಿಯಾಟ ಎಂದು ಹೆಸರು.

[ಬದಲಾಯಿಸಿ] ಚಿನ್ನಿದಾಂಡು

ಈ ಆಟವನ್ನು ಆಧುನಿಕ ಕ್ರಿಕೆಟ್ಕ್ಕೆ ಹೋಲಿಸಬಹುದು. ಚೆಂಡಿನ ಬದಲಾಗಿ ಮರದಿಂದ ಮಾಡಲಾದ ಚಿಕ್ಕ ಚಿನ್ನಿ ಹಾಗೂ ಬ್ಯಾಟ್ಗೆ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ ರೂಪದ ದಾಂಡನ್ನು ಬಳಸಲಾಗುತ್ತದೆ.

[ಬದಲಾಯಿಸಿ] ಬುಗುರಿ

ಇದಕ್ಕೆ ಬೇಕಾದದ್ದು ದಾರ ಹಾಗೂ ಬುಗುರಿ. ಇದನ್ನು ಸರಿಯಾಗಿ ಆಡಿಸಲು ನೈಪುಣ್ಯತೆ ಬೇಕು.

[ಬದಲಾಯಿಸಿ] ಕಣ್ಣು ಮುಚ್ಚಾಲೆ

ಇದು Hide and Seek ಗೆ ಹೋಲಿಸಬಹುದು

[ಬದಲಾಯಿಸಿ] ಜನಪದ ಬೊಂಬೆಯಾಟಗಳು

  • ಉತ್ತರಕರ್ನಾಟಕದ ಬೊಂಬೆಯಾಟಗಳು
  • ತೊಗಲು ಬೊಂಬೆಯಾಟ
  • ಬೊಂಬೆಯಾಟದಲ್ಲಿ ಯಕ್ಷಗಾನ
  • ದಕ್ಷಿಣ ಕರ್ನಾಟಕದ ಬೊಂಬೆಯಾಟಗಳು
  • ಸೂತ್ರದ ಬೊಂಬೆಯಾಟಗಳು
  • ಗೊಂದಲಿಗರ ಕಥೆಗಳು

[ಬದಲಾಯಿಸಿ] ಗಾದೆಗಳು ಮತ್ತು ಒಗಟುಗಳು

[ಬದಲಾಯಿಸಿ] ಗಾದೆಗಳು

ಗಾದೆಗಳು ಹೇಗೆ, ಎಲ್ಲಿ, ಯಾವಾಗ ಹುಟ್ಟಿಕೊಂಡದ್ದು ಎಂದು ಬಲ್ಲವರಾರು? ಇವು ಜನರ ಬಾಯಿಂದ-ಬಾಯಿಗೆ, ತಲೆಮಾರಿನಿಂದ-ತಲೆಮಾರಿಗೆ ಹಬ್ಬುವ ನುಡಿಗಟ್ಟುಗಳು. ಎಲ್ಲ ಗಾದೆಗಳು ಸತ್ಯ ವಾಕ್ಯವನ್ನು ಅರುಹುತ್ತವೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

ಅಟ್ಟ ಹಾರದ ಬೆಕ್ಕು ಬೆಟ್ಟ ಹಾರೀತೇ?

ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ಯೇ?

ಗಾಣಿಗ ಅಯ್ಯೋ ಅಂದರೆ ನೆತ್ತಿ ತಣ್ಣಗಾಗುತ್ತದೆಯೇ?

ಸೆಗಣಿಯವನ ಜೊತೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು.

ತುಪ್ಪ ಅಳೆಯೋ ಕೈ ಜಿಡ್ಡಾಗೋದಿಲ್ವೇ?

ಅಂಗೈ ಹುಣ್ಣಿಗೆ ಕನ್ನಡಿ ಏಕೆ?

ಆಕಾಶ ನೋಡಲು ನೊಕುನುಗ್ಗಲೇಕೆ?

ವೇದಾಂತ ಹೇಳಕ್ಕೆ ಬದನೇಕಾಯಿ ತಿನ್ನಕ್ಕೆ!

'ಹೋದೆಯಾ ಪಿಶಾಚಿ' ಎಂದರೆ 'ಬಂದೆ ಗವಾಕ್ಷೀಲಿ' ಅಂತಂತೆ!

ಬೆಳೆಯುವ ಸಿರಿ ಮೊಳಕೇಲಿ!

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.

ಬಡವನ ಸಿಟ್ಟು ದವಡೆಗೆ ಮೊಲ.

ಆಕಳು ಕಪ್ಪಾದರೆ ಹಾಲು ಕಪ್ಪೇ!

ಓದು ಒಕ್ಕಾಲು ಬುಧ್ಧಿ ಮುಕ್ಕಾಲು.

ಇದ್ದುದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಒದ್ದರಂತೆ!

ಕಂಡದ್ದನ್ನು ಆಡಿದರೆ ಕೆಂಡದಂಥ ಕೋಪ.

ನಾಯಿ ಬಾಲ ಡೊಂಕು.

ಬೆಕ್ಕಿಗೆ ಚೆಲ್ಲಾಟ;ಇಲಿಗೆ ಪ್ರಾಣಸಂಕಟ.

ಹಾಸಿಗೆ ಇದ್ದಷ್ಟು ಕಾಲು ಚಾಚು.

ನವಿಲು ಕುಣೀತೂಂತ ಕೆಂಬೂತ ಕುಣೀತಂತೆ!

ಬೀಸೊ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು.

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ.

ಅರಮನೆ ಮುಂದೆ ನೆರಮನೆ ಇರಬಾರದು.

ಅಲ್ಪ ವಿದ್ಯಾ ಮಹಾ ಗರ್ವಿ.

ತುಂಬಿದ ಕೊಡ ತುಳುಕಲ್ಲ.

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೆಲಿ ಕೊಡೆ ಹಿಡಿಸಿದನಂತೆ!

ಹಣ್ಣು ತಿಂದವ ಜಾರಿಕೊಂಡ, ಸಿಪ್ಪೆ ತಿಂದವ ಸಿಕ್ಕಿಕೊಂಡ!

ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ!

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು!

ಬೆಕ್ಕಿಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕಿದರಂತೆ!

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ!

ಹದಗಡಲೆ ಅಂದರೆ ನಂಗೆರಡು ಅಂದರಂತೆ!

ಸಾವಿರ ವರ್ಷ ಸಾಮುಮಾಡಿ ಸಾಯೋ ಮುದುಕಿ ಸೊಂಟ ಮುರಿದ!

ಮದುವೆಯಾಗೊ ಬ್ರಾಹ್ಮಣ ಅಂದರೆ ನೀನೆ ನನ್ನ ಹೆಂಡತಿ ಅಂದನಂತೆ!

ಕೋತಿ ತಾನು ಕೆಡುವುದಲ್ಲದೆ ವನನೆಲ್ಲ ಕೆಡಸಿತಂತೆ!

ಎತ್ತು ಏರಿಗೆ ಎಳೆದರೆ ಕೋಣ ನೀರಿಗಿಳಿಯಿತು!

ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡಿದಂತೆ!

ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು.

ಅಕ್ಕಿ ಮೇಲೆ ಆಸೆ; ನಂಟರ ಮೇಲೆ ಪ್ರಾಣ.

ಪಾಲಿಗೆ ಬಂದದ್ದು ಪಂಚಾಮೃತ.

ಉಂಡ ದಿನವೇ ಉಗಾದಿ;ಮಿಂದ ದಿನವೇ ದೀಪಾವಳಿ.

ಆಳಾಗಿ ದುಡಿ, ಅರಸಾಗಿ ಉಣ್ಣು.

ಉಂಡೂ ಹೋದ; ಕೊಂಡೂ ಹೋದ.

ಉಪ್ಪು ತಿಂದವ ನೀರು ಕುಡಿಯಲೇ ಬೇಕು.

ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.

ತಾಯಿಯಂತೆ ಮಗಳು; ನೂಲಿನಂತೆ ಸೀರೆ.

ಅಳಿಯ ಅಲ್ಲ ಮಗಳ ಗಂಡ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.

ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ.

ಮಾತು ಬಲ್ಲವನಿಗೆ ಜಗಳವಿಲ್ಲ;ಊಟಬಲ್ಲವನಿಗೆ ರೋಗವಿಲ್ಲ.

ಹೊಸ ವೈದ್ಯನಿಗಿಂತ ಹಳೆ ರೋಗಿ ಮೇಲು.

ಮಂಗನ ಕೈಯಲ್ಲಿ ಮಾಣಿಕ್ಯ.

ಕೋತಿ ಹುಣ್ಣು ಬ್ರಹ್ಮ ರಾಕ್ಷಸ.

ಹೆತ್ತವರಿಗೆ ಹೆಗ್ಗಣ ಮುದ್ದು;ಕಟ್ಟಿಕೊಂಡವರಿಗೆ ಕೋಡಗ ಮುದ್ದು.

ಕೊಸನ್ನು ಕೊಂಕುಳಲ್ಲಿಟ್ಟುಕೊಂಡು ಊರೆಲ್ಲಾ ಹುಡುಕಿದರಂತೆ.

ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ.

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

ಓತಿಕೇತಕ್ಕೆ ಬೇಲಿ ಸಾಕ್ಷಿ.

ಕೋಳಿ ಕೂಗದಿದ್ದರೆ ಬೆಳಗಾಗೋದಿಲ್ವೇ?

ದೀಪದ ಕೆಳಗೇ ಕತ್ತಲೆ.

ಸಂತೆ ಹೊತ್ತಿಗೆ ಮೊರು ಮೊಳ.

ಹಿತ್ತಿಲ ಗಿಡ ಮದ್ದಲ್ಲ.

ರಾತ್ರೆ ಇಡೀ ರಾಮಾಯಣ ಕೇಳಿ ರಾಮನಿಗೊ ಸೀತೆಗೊ ಏನು ಅಂದರಂತೆ.

ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊರು ಮೊಳ ಹಾಕಿದರಂತೆ.

ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ ?

ಇರುಳು ಕಂಡ ಬಾವಿಗೆ ಹಗಲು ಬಿದ್ದರಂತೆ.

ಶ್ರೀಮಂತರ ಮನ ನೋಟ ಚಂದ, ಬಡವರ ಮನೆ ಊಟ ಚಂದ.

ಎಲ್ಲರ ಮನೆ ದೋಸೆ ತೂತು.

ಒಬ್ಬ ಚಾಪೆ ಕೆಳಗೆ ನುಸುಳುದರೆ, ಇನ್ನೊಬ್ಬ ರಂಗೋಲೆ ಕೆಳಗೆ ನುಸುಳಿದ.

ಹಿರಿಯಕ್ಕನ ಚಾಳಿ ಮನೆಯವರಿಗೆಲ್ಲಾ.

ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ.

ಊರಿಗೆ ಅರಸ ಆದರೂ ತಾಯಿಗೆ ಮಗ.

ಹಾಳೂರಿಗೆ ಉಳಿದವನೆ ಗೌಡ.

ಅಯ್ಯೊ ಪಾಪ ಅಂದರೆ ಆರು ತಂಗಳು ಆಯಸ್ಸು ಕಮ್ಮಿ.

ಕೈಲಾಗದವನು ಮೈಪರಚಿಕೊಂಡ.

ಕೈ ಕೆಸರಾದರೆ ಬಾಯಿ ಮೊಸರು.

ಬಾಯಿದ್ದವನು ಬರಗಾಲದಲ್ಲೂ ಬದುಕಿದ.

ತಾಳಿದವನು ಬಾಳಿಯಾನು.

ಹಾಡುತ್ತ್ತಾಹಾಡುತ್ತಾ ರಾಗ, ಉಗುಳುತ್ತಾಉಗುಳುತ್ತಾ ರೋಗ.

ಅಪತ್ತಿಗಾದವನೇ ನಂಟ.

ಕೈ ತೋರಿಸಿ ಅವಲಕ್ಷಣ ಎನ್ನಿಸಿಕೊ.

ಕೋಣನ ಮುಂದೆ ಕಿಂದರಿ ಬಾರಿಸಿದಂತೆ.

ಯಾರಂತೆ ಅಂದರೆ ಊರಂತೆ.

ಗುಂಪಿನಲಿ ಗೋವಿಂದ.

ಊರೆಲ್ಲಾ ಕೊಳ್ಳೆ ಹೊಡೆದಮೇಲೆ, ದಿಡ್ಡಿ ಬಾಗಿಲು ಹಾಕಿದಂತೆ.

ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.

ಕಾರ್ಯವಾಸಿ ಕತ್ತೆ ಕಾಲು ಹಿಡಿ.

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

ತಾ ಅನ್ನೋದು ತಾತನ ಕಾಲದಿಂದ ಬಂದಿದೆ, ಕೊ ಅನ್ನೋದು ಕುಲದಲ್ಲೆ ಇಲ್ಲ.

ದೇವರು ವರ ಕೊಟ್ಟರೊ ಪೂಜಾರಿ ವರ ಕೊಡ.

ಶಂಖದಿಂದ ಬಿದ್ದರೇ ತೀರ್ಥ.

ಅತಿ ಆಸೆ ಗತಿ ಕೇಡು.

ಅತಿ ಆದರೆ ಅಮೃತವೂ ವಿಷ.

ಬೆಳ್ಳಗಿರುವುದೆಲ್ಲಾ ಹಾಲಲ್ಲ.

ಹನಿಹನಿ ಕೂಡಿದರೆ ಹಳ್ಳ.


[ಬದಲಾಯಿಸಿ] ಒಗಟುಗಳು

ಒಗಟುಗಳು ಒಂದು ಬಗೆಯ ಜಾಣ್ಮೆಗೆ ಎರೆಗೆ ಒಡ್ಡುವ ತಿರುಳು-ಮುರುಳಾದ ಪ್ರಶ್ನೆಗಳು. ಇದನ್ನು ಬೇರೊಬ್ಬರನ್ನು ಅಳೆಯಲು, ಮನರಂಜಿಸಲು ಹುಟ್ಟಿಕೊಂಡ ಪದ್ಧತಿ. ಪ್ರಶ್ನೆಗೆ ಉತ್ತರ ಗೊತ್ತಾದ ತಕ್ಷಣ 'ಓ ಇದಾ!' ಎಂದು ಅಚ್ಚರಿಗೊಳ್ಳುತ್ತಾರೆ ಜಾಣ-ಜಾಣೆಯರು.

ಸಾವಿರ ಮಕ್ಕಳಿಗೆ ಒಂದೇ ಉಡಿದಾರ(ಪರಕೆ)

ಅಮ್ಮನ ಸೀರೆಯ ಮಡಿಸಾಲಾರೆ ಅಪ್ಪನ ದುಡ್ಡನು ಎಣಿಸಾಲಾರೆ!(ಆಕಾಶ,ನಕ್ಷತ್ರ)

ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಲಾರದ ಹಣ್ಣು ಬಲು ರುಚಿ(ಮಗು).

ಹಾರುವುದು ಹಕ್ಕಿಯಲ್ಲ, ಕೊಂಬು ಉಂಟು ಗೂಳಿಯಲ್ಲ, ಬಾಲ ಉಂಟು ಕೋತಿಯಲ್ಲ(ಗಾಳಿಪಟ)

[ಬದಲಾಯಿಸಿ] ಜಾನಪದ ಹಬ್ಬಗಳು ಮತ್ತು ಸಂಪ್ರದಾಯಗಳು

  • ನಾಗ ಪಂಚಮಿ
  • ಹಟ್ಟಿ ಹಬ್ಬ (ಜಾನಪದ ದೀಪಾವಳಿ)
  • ಹಿರಿಯರ ಹಬ್ಬ
  • ಮಾಳದ ಅಮಾವಾಸ್ಯೆ
  • ಉಗಾದಿ
  • ದಸರೆಯ ಸಮಯದಲ್ಲಿ ಜಾನಪದ ಆಚರಣೆಗಳು
  • ಸಂಕ್ರಾಂತಿ
  • ಕರ್ನಾಟಕದಲ್ಲಿ ಜಾನಪದ ಶೈಲಿಯ ಮದುವೆಗಳು

[ಬದಲಾಯಿಸಿ] ಜಾನಪದ ಪುರಾಣಗಳು

ಕೆಲವು ಜಾನಪದ ಪುರಾಣಗಳ ಪಟ್ಟಿ

  • ಹಾಲುಮತ ಪುರಾಣ
  • ಮಂಟೇಸ್ವಾಮಿ ಕಥಾಪ್ರಸಂಗ
  • ಮಲೆ ಮಹದೇಶ್ವರ ಸ್ವಾಮಿಯ ಪುರಾಣ
  • ಮೈಲಾರಲಿಂಗನ ಪುರಾಣ
  • ರೇವಣ ಸಾಂಗತ್ಯ
  • ಏಳುಕೊಳ್ಳದ ಎಲ್ಲಮ್ಮನ ಪುರಾಣ
  • ತುಳುನಾಡಿನ ಜಾನಪದ ಪುರಾಣ ಕಥೆಗಳು

[ಬದಲಾಯಿಸಿ] ಮಾಟ-ಮಂತ್ರ

  • ಬಣಜಾರರ ಮಂತ್ರವಿದ್ಯೆಗಳು
  • ಮೋಡಿ ವಿದ್ಯೆ ಮತ್ತು ರಣಮೋಡಿ
  • ಜನಪದರಲ್ಲಿ ಭವಿಷ್ಯ ಹೇಳುವ ವಿದ್ಯೆ
  • ಕಣಿಕಾರರು